ಅಲ್ಪಸಂಖ್ಯಾತರು ಸತ್ತರೆ ಬಿಜೆಪಿಗೆ ಓಟು ಬರುವುದಿಲ್ಲ, ಹಿಂದೂಗಳು ಸಾಯಬೇಕು: ರಮಾನಾಥ್ ರೈ
ಮಂಗಳೂರು, ಆ.19: ಕೊಡಗಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ. ಹಿಂದೂಗಳ ಹತ್ಯೆ ಆದರೆ ಬಿಜೆಪಿಗೆ ಲಾಭ. ಬಿಜೆಪಿ ಪಕ್ಷ ಬಂದಾಗಿನಿಂದ ಕೊಲೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ರಮನಾಥ್ ರೈ ಆಕ್ರೋಶ ಹೊರಹಾಕಿದರು.
ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ರಮನಾಥ್ ರೈ ಮಾತನಾಡಿ, "ಕಾಂಗ್ರೆಸ್ ಹಿಂಸೆಯನ್ನು ಬೆಂಬಲಿಸುವ ಪಕ್ಷ ಅಲ್ಲ. ಈಗ ಮತೀಯ ವಾದಿಗಳು ಪರಾಕಷ್ಠೆ ಮೆರೆದಿದ್ದು, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿದ್ದಾರೆ. ವಿಪಕ್ಷ ನಾಯಕ ಹುದ್ದೆಗೆ ತನ್ನದೇ ಗೌರವ ಇದೆ. ಪ್ರಮುಖ ಸ್ಥಾನದಲ್ಲಿರುವ ಸಿದ್ಧರಾಮಯ್ಯನವರ ವಿರುದ್ಧದ ಕೃತ್ಯಕ್ಕೆ ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ರಾಜ್ಯದಲ್ಲಿ ಅನೇಕ ಹತ್ಯೆಗಳಾಗಿವೆ, ನಮ್ಮ ಸರ್ಕಾರ ಇದ್ದಾಗಲೂ ಆಗಿದೆ. ಆದರೆ ಹತ್ಯೆಯಾಗಿರುವ ಪ್ರಕರಣಗಳಲ್ಲಿ ನಮ್ಮ ಕಾಂಗ್ರೆಸ್ನ ಕಾರ್ಯಕರ್ತರು ಯಾರು ಆರೋಪಿಗಳಿಲ್ಲ," ಎಂದು ರಮಾನಾಥ್ ರೈ ಹೇಳಿದರು.
ಎಲ್ಲಾ ಹತ್ಯೆಯ ಆರೋಪಿಗಳು ಎರಡು ಪಕ್ಷಗಳ ಕಾರ್ಯಕರ್ತರು ಆಗಿದ್ದಾರೆ. ಅದರಲ್ಲಿ ಒಂದು ಪಕ್ಷ ರಾಜ್ಯ ಮತ್ತೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಇನ್ನೊಂದು ಸಣ್ಣ ಪಕ್ಷವಾಗಿದೆ. ಬಿಜೆಪಿಯಲ್ಲಿರುವ ಸುಮಾರು ಜನ ಹತ್ಯೆಯ ಆರೋಪಿಗಳು ಆಗಿದ್ದಾರೆ. ನಂತರದ ಆರೋಪಿಗಳ ಸ್ಥಾನದಲ್ಲಿ ಎಸ್ಡಿಪಿಐಯವರು ಇದ್ದಾರೆ. ಹರೀಶ್ ಪೂಜಾರಿ, ಬಾಳಿಗಾ ಅವರ ಹತ್ಯೆಯ ಆರೋಪಿಗಳು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಕೊಲೆಗಳ ಹಿಂದಿರುವ ಸೂತ್ರದಾರರನ್ನು ಪತ್ತೆ ಮಾಡುವ ಕೆಲಸ ಆಗಬೇಕಿದೆ ಎಂದು ರಮಾನಾಥ್ ರೈ ಗುಡುಗಿದರು.
ಎಡಿಜಿಪಿ ಅಲೋಕ್ ಕುಮಾರ್ಗೆ ಸಾಧ್ಯ ಇದ್ದರೆ ಈ ಆರೋಪಿ ಸ್ಥಾನದಲ್ಲಿರುವ ಸೂತ್ರದಾರರಿಗೆ ಶಿಕ್ಷೆ ನೀಡಬೇಕು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲಾಟೆ ಸಂಪೂರ್ಣ ನಿಂತುಹೋಗುತ್ತದೆ. ಹಿಂದುಳಿದ ವರ್ಗದ ಯುವಕರು ಆರೋಪಿ ಸ್ಥಾನದಲ್ಲಿ ಇದ್ದಾರೆ. ಇದರ ಸೂತ್ರದಾರರು ಯಾವುದೇ ಚಿಂತೆ ಇಲ್ಲದೆ ತಿರುಗಾಡುತ್ತಿದ್ದಾರೆ. ಆದ್ದರಿಂದ ಸೂತ್ರದಾರಿಗಳನ್ನು ಮೊದಲು ಬಂಧಿಸಿ ಎಂದು ಎಡಿಜಿಪಿ ಅಲೋಕ್ ಕುಮಾರ್ಗೆ ಸಲಹೆ ನೀಡಿದ್ದಾರೆ.
ಅಲ್ಪಸಂಖ್ಯಾತರು ಸತ್ತರೆ ಬಿಜೆಪಿಗೆ ಓಟು ಬರುವುದಿಲ್ಲ. "ಹಿಂದೂಗಳು ಸಾಯಬೇಕು, ಅದರಲ್ಲೂ ಬಿಲ್ಲವ ಸಾಯಬೇಕು, ಅದಕ್ಕಾಗಿಯೇ ಹರೀಶ್ ಪೂಜಾರಿ ಕೊಲೆ ಆಯ್ತು, ಹರೀಶ್ ಪೂಜಾರಿಯನ್ನು ಕೊಲೆ ಮಾಡಿದವನು ಮೂರನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ." ಕೊಲೆ ಮಾಡಿದ ಕಾರ್ಯಕರ್ತರು ತುಂಬಿರುವ ಬಿಜೆಪಿ ಪಕ್ಷಕ್ಕೆ ಓಟು ಕೊಟ್ಟ ಎಲ್ಲರಿಗೂ ದೋಷ ಬರುತ್ತದೆ. ಘರ್ಷಣೆ, ಗಲಾಟೆ ಆಗದಂತೆ ನೋಡಿಕೊಳ್ಳಬೇಕು ಎನ್ನುವ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ರಮಾನಾಥ್ ರೈ ಹೇಳಿದರು.
ಬಂಟ್ವಾಳದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಸಂಧರ್ಭದಲ್ಲಿ ವೇದಿಕೆಯ ಕೆಳಗಡೆ ಗಾಂಧಿ,ಅಂಬೇಡ್ಕರ್ ಫೋಟೋ ಇಟ್ಟಿದ್ದಾರೆ,ಮುಖಂಡರು ಅಧಿಕಾರಿಗಳ ಕಾಲಿನ ಕೆಳಗೆ ಭಾವಚಿತ್ರ ಇಟ್ಟಿದ್ದಾರೆ ಇದು ಮಹಾನ್ ವ್ಯಕ್ತಿಗಳಿಗೆ ಮಾಡಿದ ಅವಮಾನ ಅಂತಾ ರಮಾನಾಥ್ ರೈ ಹೇಳಿದ್ದಾರೆ..