ಕೋವಿಡ್ನಿಂದ ಸಾವನ್ನಪ್ಪಿದವರ ಅಸ್ಥಿ ವಿಸರ್ಜನೆ ಮಾಡಿದ ನಳಿನ್ ಕುಮಾರ್ ಕಟೀಲ್
ಮಂಗಳೂರು, ಜೂನ್ 21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ ಸಾವಿರದ ಗಡಿ ದಾಟಿದೆ. ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರದ ಕಾರಣ ಕಠಿಣ ಲಾಕ್ಡೌನ್ ಮುಂದುವರಿಸಲಾಗಿದೆ.
ಇದೇ ವೇಳೆ ಕೊರೊನಾ ವೈರಸ್ನಿಂದ ಸಾವನ್ನಪ್ಪಿದ 12 ಮಂದಿಯ ಚಿತಾಭಸ್ಮ ಸಂಗ್ರಹಿಸಲು ವಾರಸುದಾರರು ಬರದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಸೋಮೇಶ್ವರದ ಸೋಮನಾಥೇಶ್ವರ ಸಮುದ್ರ ತೀರದಲ್ಲಿ ವಿಸರ್ಜನೆ ಮಾಡಿದರು.
ಬೆಂಗಳೂರು- ಧರ್ಮಸ್ಥಳ ಬಸ್ ತಡೆಹಿಡಿದ ಪೊಲೀಸರು; ಪ್ರಯಾಣಿಕರು ಅತಂತ್ರ
ಇದಕ್ಕೂ ಮುನ್ನ ದೇವಸ್ಥಾನದ ಹೋಮ ಮಂದಿರದಲ್ಲಿ ಶಾಸ್ತ್ರೋಕ್ತವಾಗಿ ತಿಲಹೋಮ ಕಾರ್ಯವನ್ನು ಮಾಡಲಾಗಿದೆ. ಬಳಿಕ ಸಮುದ್ರದಲ್ಲಿ ಚಿತಾಭಸ್ಮವನ್ನು ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, "ಕಂದಾಯ ಸಚಿವ ಆರ್. ಅಶೋಕ್ರವರ ಆಶಯದಂತೆ ಮೃತರ ಅಂತರಾತ್ಮಗಳಿಗೆ ಮೋಕ್ಷ ಕಾರ್ಯ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 12 ಮಂದಿಯ ಪೈಕಿ ನಿರ್ಗತಿಕರು ಸೇರಿದಂತೆ ಕುಟುಂಬಸ್ಥರು ಬಾರದೇ ಅನಾಥವಾಗಿ ಉಳಿದವರ ಚಿತಾಭಸ್ಮ ಕೂಡಾ ಇತ್ತು. ಎಲ್ಲರ ಆತ್ಮಕ್ಕೆ ಮೋಕ್ಷ ಸಿಗುವಂತೆ ಪ್ರಾಥನೆ ಮಾಡಿ, ಚಿತಾಭಸ್ಮವನ್ನು ಸೋಮೇಶ್ವರ ಸಮುದ್ರಕ್ಕೆ ಸಮರ್ಪಣೆ ಮಾಡಿದ್ದೇವೆ,'' ಎಂದು ಹೇಳಿದರು.