ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ನಾಯಿ ಅಂತಾ ನಿಂದಿಸಿದ ಬಿಜೆಪಿ ಮುಖಂಡ
ಮಂಗಳೂರು, ಜೂನ್ 8: ಮಹಿಳಾ ಅಧಿಕಾರಿಗೆ "ಕಾಂಗ್ರೆಸ್ನ ನಾಯಿ' ಎಂದು ಬಿಜೆಪಿ ಮುಖಂಡ ನಿಂದಿಸಿರುವ ಘಟನೆ ಮಂಗಳೂರು ಹೊರವಲಯದ ಮುಡಿಪು ಎಂಬಲ್ಲಿ ನಡೆದಿದೆ.
ಕರ್ನಾಟಕ ಜಲಮಂಡಳಿ ಇಂಜಿನಿಯರ್ ಶೋಭಾ ಲಕ್ಷ್ಮಿ ಎಂಬುವವರಿಗೆ ಸ್ಥಳೀಯ ಬಿಜೆಪಿ ಮುಖಂಡ, ನ್ಯಾಯವಾದಿ ಅಸ್ಗರ್ ಮುಡಿಪು ಎಂಬಾತ ಅವಾಚ್ಯವಾಗಿ ಬೈದು ನಿಂದನೆ ಮಾಡಿದ್ದಾನೆ.
ಮಂಗಳೂರು ಶಾಸಕ ಯು.ಟಿ ಖಾದರ್ ಅನುದಾನದ ಕಾಮಗಾರಿ ಇದಾಗಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ತಡೆದು ಅಧಿಕಾರಿಗೆ ನಿಂದನೆ ಮಾಡಿದ್ದಾನೆ.
ಕಾಮಗಾರಿ ನಡೆಯಬೇಕಾದರೆ ಆರ್ಡರ್ ಕಾಪಿ ಕೊಟ್ಟು ಕೆಲಸ ಮಾಡಬೇಕು ಅಂತ ಅವಾಚ್ಯವಾಗಿ ಬೈದಿದ್ದಲ್ಲದೆ, ಬಿಜೆಪಿಯ ಒಬ್ಬ ಸಾಕು, ಕಾಂಗ್ರೆಸ್ನ ನೂರು ಮಂದಿಗೆ ಅಂತ ಆವಾಜ್ ಹಾಕಿದ್ದಾನೆ.
"ನೀವು ಕಾಂಗ್ರೆಸ್ನ ನಾಯಿ, ಎಂಜಲು ತಿಂದು ಸರ್ಕಾರಕ್ಕೆ ಕಪ್ಪುಚುಕ್ಕೆ ತಂದವರು, ಕಾಂಗ್ರೆಸ್ನ ಒಬ್ಬ ನಾಯಿ ಇಲ್ಲಿ ಗುಂಡಿ ತೆಗೆದು ವಂಚನೆ ಮಾಡಿದ್ದಾನೆ'' ನಾನು ಕೋರ್ಟ್ ಹೋಗುತ್ತೇನೆ, ನೀವು ಕೇಸ್ ಕೊಡಿ ಏನಾದರೂ ಮಾಡಿ'' ಎಂದು ಕೂಗಾಡಿದ್ದಾನೆ.
ಅವಾಚ್ಯವಾಗಿ ನಿಂದಿಸಿದ ಹಿನ್ನೆಲೆಯಲ್ಲಿ ಕೊಣಾಜೆ ಠಾಣೆಯಲ್ಲಿ ಮಹಿಳಾ ಅಧಿಕಾರಿ ದೂರು ನೀಡಿದ್ದು, ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಿನ್ನಲೆಯಲ್ಲಿ ಅಸ್ಗರ್ ಮುಡಿಪು ವಿರುದ್ಧ ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಿದ್ದಾರೆ.
ಸದ್ಯ ಸಾಮಾಜಿಕ ತಾಣಗಳಲ್ಲಿ ಅಸ್ಗರ್ ಬೈಗುಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಕ್ಕಟೆ ಪ್ರಚಾರದ ದೃಷ್ಟಿಯಿಂದ ಈ ರೀತಿ ಮಾಡಿರುವ ಬಗ್ಗೆ ಚರ್ಚೆಯಾಗುತ್ತಿದೆ.