ರಾಜೀವ್ ಗಾಂಧಿ ಹತ್ಯೆಗೆ ಬಿಜೆಪಿ ಪರೋಕ್ಷ ಕಾರಣ: ಸಚಿವ ಖಾದರ್
ಮಂಗಳೂರು, ಅಕ್ಟೋಬರ್ 4: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಸಾವಿಗೆ ಬಿಜೆಪಿಯೇ ಪರೋಕ್ಷ ಕಾರಣ ಎಂದು ಸಚಿವ ಯುಟಿ ಖಾದರ್ ಗಂಭೀರ ಆರೋಪವನ್ನು ಮಾಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗುತ್ತಿದೆ. ಬುಲೆಟ್ ಫ್ರೂಪ್ ಕಾರು ನೀಡಲಾಗಿದೆ. ಆದರೆ ರಾಜೀವ್ ಗಾಂಧಿ ಅವರಿಗೆ ನೀಡಿದ್ದ ಭದ್ರತೆ ಬಗ್ಗೆ ಟೀಕಿಸಿದ ಬಿಜೆಪಿಯು ಭಯೋತ್ಪಾದಕರಿಗೆ ಪೂರಕ ವಾತವರಣವನ್ನು ಕಲ್ಪಿಸಿತು ಎಂದು ಆರೋಪಿಸಿದರು.
ಆದರೆ, ಇದೀಗ ಭಾರೀ ಭಧ್ರತೆಯಲ್ಲಿ ಬಿಜೆಪಿಯವರು ಹೋಗುತ್ತಿದ್ದಾರೆ. ಅಮಿತ್ ಶಾ ಅವರಿಗೆ ಭಧ್ರತೆ ನೀಡಲು ಅವರು ಕೇಂದ್ರ ಸಚಿವರಲ್ಲ, ದೇಶದ ಪ್ರಧಾನಿಯಲ್ಲ ಎಂದು ಟೀಕಿಸಿದರು.
ಅಮಿತ್ ಶಾ ಮಂಗಳೂರಿಗೆ ಬಂದ ಕುರಿತು ನಮಗೆ ತಕರಾರಿಲ್ಲ. ಆದರೆ ಮಂಗಳೂರಿಗೆ ಬಂದ ವೇಳೆ ರಾಜ್ಯದ ಜನತೆ ಜೊತೆಗೆ ಮಾತನಾಡಬೇಕಿತ್ತು. ದೇಶದ ಜನತೆಗಾಗಿ ಕೇಂದ್ರ ಸರಕಾರ ಏನೂ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯಿಂದ ರಾಜಕೀಯದಾಟ ಆರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅವರಿಂದ ಕರ್ನಾಟಕವನ್ನು ಗುಜರಾತ್ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಜನತೆ ಮಾನವೀಯತೆಗೆ ಒತ್ತು ಕೊಟ್ಟವರು. ಹೀಗಾಗಿ ಬಿಜೆಪಿಯವರ ಮಾತಿಗೆ ರಾಜ್ಯದ ಜನ ಮರುಳಾಗುವುದಿಲ್ಲ ಎಂದರು.