ಕೇಂದ್ರ ಬಿಜೆಪಿ ನಾಯಕರಿಂದ ಯಡಿಯೂರಪ್ಪಗೆ ಅವಮಾನ: ಖಾದರ್
ಮಂಗಳೂರು, ಸೆಪ್ಟೆಂಬರ್ 28: ರಾಜ್ಯಕ್ಕೆ ನೆರೆ ಪರಿಹಾರ ಹಣವನ್ನು ಬಿಡುಗಡೆ ಮಾಡದೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರವು ಬಿ. ಎಸ್. ಯಡಿಯೂರಪ್ಪ ಹಾಗೂ ರಾಜ್ಯದ ಜನರನ್ನು ಅವಮಾನ ಮಾಡಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಯು. ಟಿ. ಖಾದರ್ ಮಂಗಳೂರಿನಲ್ಲಿ ಹೇಳಿದ್ದಾರೆ.
ಕೇಂದ್ರದ ನಾಯಕರ ಜತೆಗೆ ಮಾತನಾಡಲು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಧೈರ್ಯ ಇಲ್ಲ, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ. ಅನುದಾನ ಬಿಡುಗಡೆ ಮಾಡುವುದರಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದ್ದು, ಇದರಿಂದ ರಾಜ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
ಚಂದ್ರಯಾನ2 ಯೋಜನೆ ವೈಫಲ್ಯದ ಕಾರಣ ಬಿಚ್ಚಿಟ್ಟ ಖಾದರ್
ಜನರಿಗಾಗಿ ಮೀಸಲಾದ ಹಣವನ್ನು ಕಸಿಯದೆ ಸರ್ಕಾರ ನಡೆಸಲು ಇವರಿಗೆ ಸಾಧ್ಯವಿಲ್ಲವೆ? ಬಡವರಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಯಾವ ಕಾರಣಕ್ಕೆ ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಅನುದಾನವನ್ನು ಸರಿಯಾಗಿ ಬಿಡುಗಡೆ ಮಾಡುವುದಕ್ಕೆ ರಾಜ್ಯದಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ನಮ್ಮ ಮುಖ್ಯಮಂತ್ರಿ ಜತೆಗೆ ನಾವಿದ್ದೇವೆ. ಕೇಂದ್ರ ಸರ್ಕಾರವು ನಮ್ಮ ಮುಖ್ಯಮಂತ್ರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿದರು. ನಳಿನ್ ಕುಮಾರ್ ಕಟೀಲ್ ಬಗ್ಗೆ ಮಾತನಾಡಿದ ಖಾದರ್, ಕಟೀಲ್ ರಾಜ್ಯಾಧ್ಯಕ್ಷ ಹುದ್ದೆಗೆ ಏರಿದರು ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಪ್ರಯೋಜನ ಆಗಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಹೆದ್ದಾರಿಗಳು ಹಾಳಾಗಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಳಿ ರಸ್ತೆ ಸರಿಪಡಿಸಲು ಹಣವಿಲ್ಲ. ಕಟೀಲ್ ತಕ್ಷಣವೇ ಎಲ್ಲ ಪಕ್ಷಗಳ ಶಾಸಕರ ಸಭೆ ಕರೆಯಬೇಕು ಎಂದು ಖಾದರ್ ಹೇಳಿದರು.