ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಹಕ್ಕಿ ಜ್ವರ'ದ ಭೀತಿ, ಕಟ್ಟೆಚ್ಚರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಜಿಲ್ಲೆಯಾದ್ಯಂತ ಇರುವ ಕೋಳಿ ಫಾರ್ಮ್ ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಪಿಲಿಕುಳ ನಿಸರ್ಗಧಾಮದಲ್ಲಿ ಅಗತ್ಯ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗುತ್ತಿದೆ
ಮಂಗಳೂರು, ಜನವರಿ 6: ಕೇರಳ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಇದೇ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 'ಹಕ್ಕಿ ಜ್ವರ' ದ ಭೀತಿ ಆವರಿಸಿದೆ. ಹೀಗಾಗಿ ಕರಾವಳಿ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯಾದ್ಯಂತ ಕೋಳಿ ಫಾರ್ಮ್ಗಳಿಂದ ನಿಯಮಿತ ವಾಗಿ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಟಿ.ತಿಪ್ಪೇಸ್ವಾಮಿ, 'ಈಗಾಗಲೇ ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಹಾಗೂ ಜಿಲ್ಲೆಯ ಕೋಳಿ ಸಾಕಾಣಿಕೆದಾರರ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಕೋಳಿ ಫಾರ್ಮ್ ಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ' ಎಂದು ತಿಳಿಸಿದ್ದಾರೆ.[ಮೈಸೂರು ಮೃಗಾಲಯದಲ್ಲಿ ಮತ್ತೊಂದು ಪಕ್ಷಿ ಸಾವು]
ಜಾಗೃತಿ ಹೇಗೆ?: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,500ರಿಂದ 2 ಸಾವಿರ ಕೋಳಿ ಸಾಕಾಣಿಕೆದಾರರಿದ್ದಾರೆ. ನಿಯಮಿತವಾಗಿ ಈ ಫಾರ್ಮ್ಗಳಲ್ಲಿ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಲು ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಕ್ಕಿಗಳ ಅಸಹಜ ಸಾವು ಸಂಭವಿಸಿದರೆ, ಕೂಡಲೇ ಇಲಾಖೆಯ ಗಮನಕ್ಕೆ ತರುವಂತೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ.
ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಇಲಾಖೆಯು ಎಲ್ಲ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಅಗತ್ಯ ಔಷಧಿ, ಇತರ ಸಲಕರಣೆಗಳೊಂದಿಗೆ ಸನ್ನದ್ಧವಾಗಿದೆ.
ಪಿಲಿಕುಳದಲ್ಲೂ ಕಟ್ಟೆಚ್ಚರ: ಪಿಲಿಕುಳ ನಿಸರ್ಗಧಾಮದಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಸರ್ಗಧಾಮದ ಕೆಲಸಗಾರರಿಗೂ ಹಕ್ಕಿ ಜ್ವರದ ಕುರಿತು ಮಾಹಿತಿ ನೀಡಲಾಗಿದೆ. ಸದ್ಯ ಪಿಲಿಕುಳ ನಿಸರ್ಗಧಾಮದಲ್ಲಿ 200ಕ್ಕೂ ಅಧಿಕ ಜಾತಿಯ ಹಕ್ಕಿಗಳಿವೆ. ಜತೆಗೆ ಸುಮಾರು 10 ಎಕರೆ ವಿಸ್ತಾರದ ಕೆರೆ ಇದ್ದು, ವಲಸೆ ಹಕ್ಕಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಹೀಗಾಗಿ ನಿಸರ್ಗಧಾಮದಲ್ಲಿ ತೀವ್ರ ನಿಗಾ ವಹಿಸಲಾಗಿದೆ.[125 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಝೂ ಕ್ಲೋಸ್..!]
20 ದಿನಗಳ ಹಿಂದೆ ಬಾತುಕೋಳಿ ಮೃತಪಟ್ಟಿದ್ದು, ಇದರ ಮಾದರಿಯನ್ನು ಪಶು ಸಂಗೋಪನಾ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಹಕ್ಕಿಜ್ವರ ಇಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಸದ್ಯಕ್ಕೆ ನಿಸರ್ಗಧಾಮದಲ್ಲಿ ಹಕ್ಕಿ ಜ್ವರದ ಸಮಸ್ಯೆ ಇಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ನಿಸರ್ಗಧಾಮದ ಅಧಿಕಾರಿ ಎಚ್.ಜಯಪ್ರಕಾಶ ಭಂಡಾರಿ 'ಒನ್ಇಂಡಿಯಾ' ಕ್ಕೆ ಮಾಹಿತಿ ನೀಡಿದ್ದಾರೆ.