ವಿಸ್ಮಯ ಕಡಲು : ನೀಲಿ ಬಣ್ಣ ತುಂಬಿಕೊಂಡು ಹೊಳೆಯುತ್ತಿರಲು ಕಾರಣವೇನು?
ಮಂಗಳೂರು, ಸಪ್ಟೆಂಬರ್ 25 : ಭಾರೀ ಮಳೆ, ನೆರೆಯ ಪರಿಸ್ಥಿತಿ, ಭಾರೀ ಭೂಕುಸಿತಕ್ಕೆ ಸಾಕ್ಷಿಯಾಗಿದ್ದ ಕರ್ನಾಟಕದ ಕರಾವಳಿಯಲ್ಲಿ ಈಗ ವಿಚಿತ್ರ ಪ್ರಾಕೃತಿಕ ಬದಲಾವಣೆ ನಡೆಯಲು ಆರಂಭಿಸಿವೆ.
ಈ ನಡುವೆ ಕಡಲಿನಲ್ಲಿ ವಿಚಿತ್ರ ವಿದ್ಯಮಾನಗಳು ಗೋಚರಿಸತೊಡಗಿವೆ. ಕಳೆದ 15 ದಿನಗಳಿಂದ ರಾತ್ರಿ ವೇಳೆ ಕರಾವಳಿ ತೀರ ಪ್ರದೇಶ ಸಮುದ್ರದ ನೀರಿನ ಕೆಳಭಾಗ ನೀಲಿ ವರ್ಣದಿಂದ ಹೊಳೆಯುತ್ತಿದೆ. ಕಡಲಲ್ಲಿ ತೆರೆಗಳ ಅಬ್ಬರ ಹೆಚ್ಚಿರುವ ಸಂದರ್ಭದಲ್ಲಿ ಬಂಡೆಗಳು ಹೆಚ್ಚಾಗಿ ಇರುವ ಜಾಗಗಳಲ್ಲಿ ನೀರು ನೀಲಿ ಬಣ್ಣದಿಂದ ಮಿನುಗುತ್ತಿದೆ.
ಪ್ರವಾಹ ಸೃಷ್ಟಿಸಿದ್ದ ಕರಾವಳಿ ನದಿಗಳು ಬತ್ತುತ್ತಿರುವುದಕ್ಕೆ ತಜ್ಞರು ಕೊಟ್ಟ ಉತ್ತರ ನೋಡಿ
ಈ ವಿದ್ಯಮಾನವನ್ನು ಉಡುಪಿಯ ಹವ್ಯಾಸಿ ಛಾಯಾಗ್ರಾಹಕ ಮೋಹಿತ್ ಶೆಣೈ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮೋಹಿತ್ ಇತ್ತೀಚೆಗೆ ಮಟ್ಟು ಸಮುದ್ರ ತೀರಕ್ಕೆ ಹೋದಾಗ ಈ ಅಪರೂಪದ ವಿದ್ಯಮಾನವನ್ನು ನೋಡಿದ್ದರು. ರಾತ್ರಿ ಹೊತ್ತು ನೀರು ನೀಲಿಯಾಗಿ ಮಿನುಗುವುದನ್ನು ಕಂಡ ಮೋಹಿತ್ ಶೆಣೈ ಅವರು ತಮ್ಮ ಕ್ಯಾಮೆರಾದಲ್ಲಿ ಈ ವಿದ್ಯಾಮಾನವನ್ನು ಸೆರೆ ಹಿಡಿದಿದ್ದಾರೆ.
ಕೇರಳ, ಕೊಡಗು ನೆರೆ: ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ ಕರಾವಳಿ ಬೀಚ್ ಗಳು
ಸಮುದ್ರದಲ್ಲಿ ಆಗುತ್ತಿರುವ ಈ ಬೆಳವಣಿಗೆಯನ್ನು ಕಂಡ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇದು ಪ್ರಾಕೃತಿಕ ಸಹಜ ಪ್ರಕ್ರಿಯೆ ಎಂದು ತಜ್ಞರ ಆಭಿಪ್ರಾಯವಾಗಿದೆ. ಸಮುದ್ರದಲ್ಲಿ ಆಗುತ್ತಿರುವ ಈ ವಿದ್ಯಮಾನವನ್ನು ಜೈವದೀಪ್ತಿ (Bioluminescence) ಎಂದು ಕರೆಯಲಾಗುತ್ತದೆ.
ಜೈವಿಕವಾಗಿ ಹುಟ್ಟುವ ಬೆಳಕು
ಜೈವಿಕವಾಗಿ ಹುಟ್ಟಿಕೊಳ್ಳುವ ಬೆಳಕು ಎಂದರ್ಥ. ಅದಕ್ಕೆ ನೀರಿನ ಕೆಲವು ಜೀವಿಗಳು ಕಾರಣ . ಪ್ರಸಕ್ತ ಕರಾವಳಿಯಲ್ಲಿ ಕಾಣಿಸಿಕೊಂಡಿರುವ ಜೈವದೀಪ್ತಿಗೆ ಸಮುದ್ರ ನೀರಿನಲ್ಲಿರುವ ಡೈನೋಫ್ಲೆಗೆಲೆಟ್ ಎನ್ನುವ ಒಂದು ವಿಧದ ಪಾಚಿ ಜೀವಿ ದೇಹದಲ್ಲಿ ಉತ್ಪಾದಿಸುವ ರಾಸಾಯನಿಕಗಳು ಕಾರಣ ಎಂದು ಹೇಳುತ್ತಾರೆ ವೈದ್ಯರಾದ ಡಾ . ಕಿಶೋರ್ ಮೋಹನ್. ಈ ಬಗ್ಗೆ ತಮ್ಮ ಬ್ಲಾಗ್ ನಲ್ಲೂ ಅವರು ವಿವರಿಸಿದ್ದಾರೆ.
ಸಮುದ್ರ ಸೇರಿರುವ ಸೂಕ್ಷ್ಮ ಜೀವಿಗಳು
ಮಳೆಗಾಲದಲ್ಲಿ ನದಿ ,ಹೊಳೆಯಲ್ಲಿ ಬೆಟ್ಟದಿಂದ ಹರಿದು ಬರುವ ನೀರು ತನ್ನೊಂದಿಗೆ ಅಪಾರ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊತ್ತು ತರುತ್ತದೆ. ಪೋಷಕಾಂಶಗಳನ್ನು ಈ ಜೀವಿಗಳು ಸೇವಿಸುತ್ತವೆ. ಸಹಸ್ರಾರು ಈ ಪಾಚಿ ಜೀವಿಗಳು ಒಟ್ಟಾಗಿರುವಾಗ ಈ ಬೆಳಕು ಕಾಣಿಸುತ್ತದೆ. ಇದು ಸೂಕ್ಷ್ಮಾಣು ಜೀವಿಗಳಾದ ಕಾರಣ ಬರಿಗಣ್ಣಿಗೆ ಒಂದೊಂದಾಗಿ ಕಾಣುವುದು ಕಷ್ಟ. ಮೀನುಗಾರರಿಗೆ ಈ ವಿದ್ಯಮಾನ ಸರ್ವೇ ಸಾಮಾನ್ಯ. ಆದರೆ ಸಮುದ್ರದಲ್ಲಾಗುವ ಈ ಬೆಳವಣಿಗೆಗೆ ವೈಜ್ಞಾನಿಕ ಕಾರಣಗಳ ಅರಿವು ಇವರಿಗಿಲ್ಲ. ಇಂತಹ ಬೆಳವಣಿಗೆ ಗಳನ್ನು ಪ್ರತಿವರ್ಷ ಕರಾವಳಿಯ ಕೆಲ ಭಾಗದಲ್ಲಿ ಕಂಡಿದ್ದೇವೆ ಎನ್ನುತಾರೆ ಸ್ತಳೀಯ ಮೀನುಗಾರ ತಾರಾನಾಥ್.
ವರ್ಷವಿಡೀ ಇರದು ಈ ಅಪರೂಪದ ದೃಶ್ಯ
ಸಮುದ್ರ ದಲ್ಲಾಗಿರುವ ಈ ಬೆಳವಣೆಗೆ ವರ್ಷವಿಡಿ ಇರುವುದಿಲ್ಲ ಹೆಚ್ಚೆಂದರೆ 10 ರಿಂದ 15 ದಿನಗಳ ಕಾಲಮಾತ್ರ ಈ ವಿದ್ಯಮಾನ ಗೋಚರಿಸುತ್ತದೆ. ಸಮುದ್ರದಲ್ಲಿ ಕಾಣಿಸುವ ಈ ನೀಲಿ ಬೆಳಕು ಹೆಚ್ಚು ಅಬ್ಬರ ಇದ್ದರೆ ಚದುರಿ ಹೋಗುತ್ತದೆ. ಕಡಿಮೆ ಇದ್ದಾಗ ಕಾಣಿಸುತ್ತದೆ . ಈ ಜೀವಿಗಳು ಮಳೆಗಾಲ ಮುಗಿಯುವ ಸಂದರ್ಭದಲ್ಲಿ ಕರಾವಳಿಯಲ್ಲಿ ಕಾಣಿಸಿಕೊಳ್ಳುತ್ತವೆ. ದಿನ ಕಳೆದಂತೆ ನೀಲಿ ಬೆಳಕು ಕಡಿಮೆಯಾಗುತ್ತಾ ಲುಪ್ತ ವಾಗುತ್ತದೆ. ಕ್ರಮೇಣ ಈ ಪಾಚಿ ಜೀವಿಗಳು ಸಾಯುತ್ತವೆ . ಇತ್ತೀಚಿನ ದಿನಗಳಲ್ಲಿ ಈ ವಿದ್ಯಮಾನ ಕಡಿಮೆಯಾಗಿದೆ.
ಮಳೆಗಾಲ ಮುಗಿಯುವಾಗ ಕಾಣುತ್ತದೆ
ಈ ಕುರಿತು ಪ್ರತಿಕ್ರಿಯಿಸಿರುವ ಮೀನುಗಾರಿಕಾ ವಿಜ್ಞಾನಿ ಡಾ. ಪ್ರತಿಭಾ ರೋಹಿತ್ ಮಳೆಗಾಲ ಮುಗಿಯುವ ಸಂದರ್ಭದಲ್ಲಿ ಇಂತಹ ವಿದ್ಯಮಾನಗಳು ಕಡಲಲ್ಲಿ ಗೋಚರಿಸುತ್ತದೆ. ಯಾವುದೋ ರಾಸಾಯನಿಕ ಕ್ರಿಯೆಯಿಂದಾಗಿ ನೀಲಿ ಬಣ್ಣದಲ್ಲಿ ಸೂಕ್ಷ್ಮ ಜೀವಿಗಳು ಹೊಳೆಯುತ್ತವೆ. ಕೆಳೆದ ವರ್ಷ ಕಾರವಾರ ಕಡಲಲ್ಲಿ ಇಂತಹುದೇ ವಿದ್ಯಮಾನ ಗೋಚರಿಸಿತ್ತು. ಕೆಲ ಕಡೆ ಸಮುದ್ರ ಹಸಿರು ಬಣ್ಣಕ್ಕೆ ತಿರುಗಿತ್ತು. ಪಾಚಿಗಳು ಒಂದೆಡೆ ಹೆಚ್ಚಾದಾಗ ಇಂತಹ ಬೆಳವಣಿಗೆಗಳು ಆಗುತ್ತವೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.