ಮಂಗಳೂರಿನಲ್ಲಿ ರಸ್ತೆಯಲ್ಲಿ ಹರಿದ ಆಯಿಲ್, ಉರುಳಿ ಬಿದ್ದ ಬೈಕ್ ಸವಾರರು
ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಆಯಿಲ್ ಹರಿದು ದ್ವಿಚಕ್ರ ವಾಹನ ಸವಾರರು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ.
ಮಂಗಳೂರು, ಸೆಪ್ಟೆಂಬರ್ 18: ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಆಯಿಲ್ ಹರಿದು ದ್ವಿಚಕ್ರ ವಾಹನ ಸವಾರರು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ.
ನಗರದ ಜ್ಯೋತಿ ವೃತ್ತದ ಬಳಿ ಇರುವ ಡ್ರೈನೇಜ್ ನಿಂದ ರಭಸವಾಗಿ ಆಯಿಲ್ ರಸ್ತೆಗೆ ಹರಿದಿದೆ. ಈ ಪರಿಣಾಮ ರಸ್ತೆಯಲ್ಲಿ ಸಾಗಿ ಬರುತ್ತಿದ್ದ ವಾಹನಗಳು ಸ್ಕಿಡ್ ಆಗಿ ರಸ್ತೆಗೆ ಉರುಳಿವೆ. 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ 12 ಜನರಿಗೆ ಗಾಯಗಳಾಗಿವೆ.
ಜ್ಯೋತಿ ವೃತ್ತದ ಬಳಿ ಇರುವ ಹೋಟೆಲ್ ಗಳ ವೇಸ್ಟ್ ಆಯಿಲ್ ಡ್ರೈನೇಜ್ ಮೂಲಕ ಹೊರಗೆ ಬಂದಿದ್ದೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ .ರಸ್ತೆಯಲ್ಲಿ ವಾಹನಗಳು ಒಮ್ಮಿಂದೊಮ್ಮೆ ಉರುಳಿ ಬಿದ್ದ ಪರಿಣಾಮ ನಗರ ವ್ಯಾಪ್ತಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ನಂತರ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ ವಾಹನ ಸವಾರರನ್ನು ಕಾಪಾಡಿದರು.
ಈ ಘಟನೆಯ ಕುರಿತು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಡ್ರೈನೇಜ್ ನಿಂದ ಹರಿಯುತ್ತಿರುವ ಆಯಿಲ್ ನಿಲ್ಲಿಸಲು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ದೂರಿದ್ದಾರೆ .