ಫಲಿತಾಂಶಕ್ಕೆ ಕ್ಷಣಗಣನೆ; ಕರಾವಳಿಯಲ್ಲಿ ಗರಿಗೆದರಿದ ಎಲೆಕ್ಷನ್ ಬೆಟ್ಟಿಂಗ್
ಮಹಾನಗರ, ಮೇ 22: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಕಳೆದ 1 ತಿಂಗಳಿಂದ ಹರಿದಾಡುತ್ತಿದ್ದ ಊಹಾಪೋಹ, ಕುತೂಹಲಗಳಿಗೂ ನಾಳೆ ತೆರೆಬೀಳಲಿದೆ. ದೇಶದಾದ್ಯಂತ ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಕುರಿತು ಭಾರೀ ಚರ್ಚೆ ಆರಂಭವಾಗಿದೆ. ಮತದಾನೋತ್ತರ ಸಮೀಕ್ಷೆಗಳು ಫಲಿತಾಂಶದ ಕಾತರವನ್ನು ಇನ್ನಷ್ಟು ಹೆಚ್ಚಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಅಭ್ಯರ್ಥಿಗಳ ಸೋಲು-ಗೆಲುವಿನ ಅಂತರದ ಲೆಕ್ಕಾಚಾರದಲ್ಲಿ ನೆಟ್ಟಿಗರು ತೊಡಗಿಸಿಕೊಂಡಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಸಾರ್ವಜನಿಕ ಸ್ಥಳಗಳು, ಅಂಗಡಿ ಮುಂಗಟ್ಟುಗಳು, ಎಲ್ಲೆಲ್ಲೂ ಫಲಿತಾಂಶದ್ದೇ ಮಾತು. ಇದಿಷ್ಟೇ ಅಲ್ಲ, ಈಗ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದ ಕುರಿತು ಬೆಟ್ಟಿಂಗ್ ಜಾಲವೂ ಸಕ್ರಿಯವಾಗಿದೆ. ಈವರೆಗೆ ಐಪಿಲ್ ನಲ್ಲಿದ್ದ ಬೆಟ್ಟಿಂಗ್ ದಂಧೆ ಈಗ ಚುನಾವಣಾ ಕಣದತ್ತ ಹರಿದಿದೆ.
ಕರಾವಳಿಯಲ್ಲಿ ಕಾಣಿಸುತ್ತಿಲ್ಲ ಬೆಟ್ಟಿಂಗ್ ಹವಾ, ಕಾರಣ ಇದೇನಾ?
ಚುನಾವಣಾ ಸಮೀಕ್ಷೆಗಳು ಹೊರಬೀಳುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆ ಗರಿಗೆದರಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ಬೆಟ್ಟಿಂಗ್ ಗಿಂತ ಈಗ ಚುನಾವಣಾ ಬೆಟ್ಟಿಂಗ್ ಗರಂ ಆಗಿದೆ.
ಅಭ್ಯರ್ಥಿಗಳ ಸೋಲು ಗೆಲುವು ಮಾತ್ರವಲ್ಲ, ಸೋಲು -ಗೆಲುವಿನ ಅಂತರದ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಬ್ಬರ ನಡುವೆ ಒಂದು ಲಕ್ಷ, ಒಂದೂವರೆ ಲಕ್ಷ, ಎರಡು ಲಕ್ಷಗಳ ಅಂತರದ ಗೆಲುವು ಬರಲಿದೆ ಎಂಬುದಾಗಿ ಬೆಟ್ ಕಟ್ಟಲಾಗುತ್ತಿದೆ.
ಮೈಸೂರಿನ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್:ಏನೆಲ್ಲಾ ಅಡವಿಟ್ಟಿದ್ದಾರೆ ಗೊತ್ತಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಫಲಿತಾಂಶದ ಕುತೂಹಲ ಮಾತ್ರವಲ್ಲದೇ ದೂರದ ಮಂಡ್ಯ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಮಂಡ್ಯ ಕ್ಷೇತ್ರದ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಅಂದಾಜು ಗೆಲುವಿನ ಅಂತರ ಎಷ್ಟಿರಬಹುದು ಎಂಬ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಈ ವಿಷಯದಲ್ಲೂ ಬೆಟ್ಟಿಂಗ್ ನಡೆಯುತ್ತಿದೆ.