ಬೆಂಗಳೂರು- ಧರ್ಮಸ್ಥಳ ಬಸ್ ತಡೆಹಿಡಿದ ಪೊಲೀಸರು; ಪ್ರಯಾಣಿಕರು ಅತಂತ್ರ
ಮಂಗಳೂರು, ಜೂನ್ 21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಸಂಚಾರ ನಿಷೇಧವಿದ್ದರೂ ಬೆಂಗಳೂರಿನಿಂದ ಹೊರಟ ಕೆಎಸ್ಆರ್ಟಿಸಿ ಬಸ್ನ್ನು ಪೊಲೀಸರು ತಡೆದು ವಾಪಾಸ್ ಬೆಂಗಳೂರಿಗೆ ಕಳುಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಸಂಚಾರ ನಿಷೇಧವಿದ್ದರೂ, ಮಾಹಿತಿಯ ಕೊರತೆಯಿಂದ ಅಧಿಕಾರಿಗಳು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ ಹೊರಡಿಸಿದ್ದು, ಮಕ್ಕಳು- ಮಹಿಳೆಯರು ಸೇರಿದಂತೆ ಸುಮಾರು 22 ಪ್ರಯಾಣಿಕರು ಧರ್ಮಸ್ಥಳಕ್ಕೆ ತೆರಳಲು ಬಸ್ ಹತ್ತಿದ್ದರು. ಬಸ್ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಪ್ರವೇಶಿಸಿ ಕೊಕ್ಕಡ ಭಾಗ ತಲುಪುತ್ತಿದ್ದಂತೆಯೇ ಪೊಲೀಸರು ಬಸ್ನ್ನು ತಡೆ ಹಿಡಿದಿದ್ದಾರೆ. ಈ ವೇಳೆ ಪ್ರಯಾಣಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದಿದೆ.
ಕೊನೆಗೆ ಬೆಳ್ತಂಗಡಿ ತಹಶೀಲ್ದಾರ ಸ್ಥಳಕ್ಕಾಗಮಿಸಿ, ದಕ್ಷಿಣ ಕನ್ನಡ ಜಿಲ್ಲೆಯ ನಿಯಮವನ್ನು ಮನವರಿಕೆ ಮಾಡಿ ಬಸ್ನ್ನು ವಾಪಾಸ್ ಬೆಂಗಳೂರಿಗೆ ಕಳುಹಿಸಿದ್ದಾರೆ. ಆದರೆ ಬಸ್ನಲ್ಲಿದ್ದ ಪ್ರಯಾಣಿಕರು ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ನಿಷೇಧವಿದ್ದರೂ, ಬಸ್ ಹೊರಡಿಸಿದ್ದರಿಂದ ನಾವು ಅತಂತ್ರರಾಗಿದ್ದೇವೆ. ಜಿಲ್ಲೆಗಳ ಅಧಿಕಾರಿಗಳ ನಡುವೆಯೇ ಮಾಹಿತಿ ವಿನಿಮಯ ಆಗುತ್ತಿಲ್ಲ. ಧರ್ಮಸ್ಥಳಕ್ಕೆ ಹೋಗಲು ಬಸ್ ಹತ್ತಿದರೆ ಈಗ ವಾಪಾಸ್ ಕಳುಹಿಸಿದ್ದಾರೆ. ಮಕ್ಕಳು-ಮಹಿಳೆಯರು ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video