ಎಲ್ಲರಂತಲ್ಲ ಈ ತಹಶೀಲ್ದಾರ್; ಸಂತ್ರಸ್ತರಿಗೆಂದು ತಲೆಮೇಲೆ ಮೂಟೆ ಹೊತ್ತು ತಂದರು!
ಮಂಗಳೂರು ಆಗಸ್ಟ್ 17 : ಭಾರೀ ಮಳೆ ಹಾಗು ಪ್ರವಾಹದಿಂದ ತತ್ತರಿಸಿದ ಊರಿನಲ್ಲಿ ಹಸಿವು ನೀಗಿಸಿಕೊಳ್ಳೋದಕ್ಕೂ ತುತ್ತು ಅನ್ನಕೂ ಗತಿಯಿಲ್ಲದ ಊರಿಗೆ ಸರಕಾರಿ ಅಧಿಕಾರಿ ಒಬ್ಬರು ಅದರಲ್ಲೂ ತಹಶೀಲ್ದಾರ್ ದರ್ಜೆಯ ಅಧಿಕಾರಿ ಒಬ್ಬರು ತನ್ನ ತಲೆ ಮೇಲೆ ಸಾಮಗ್ರಿಗಳನ್ನು ಹೊತ್ತು ತಂದರೇ!.
ಪ್ರವಾಹದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300 ಕೋಟಿಗೂ ಅಧಿಕ ನಷ್ಟ
ಆದರೆ ಇದು ನಂಬಲೇ ಬೇಕಾದ ಘಟನೆ . ಸರಕಾರಿ ಅಧಿಕಾರಿಗಳೆಂದರೆ ಕೆಸಲಮಾಡದ ಕೇವಲ ಮಾತನಾಡುವ , ದರ್ಪ ತೋರುವ ತಮ್ಮ ಕೆಲಸವನ್ನೂ ಇನ್ನೊಬ್ಬರಿಂದ ಮಾಡಿಸುವವರು ಎಂಬೆಲ್ಲಾ ಆರೋಪಗಳಿವೆ. ಆದರೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತ್ರ ಅಪವಾದ.
ಮುರಿದು ಬಿದ್ದ ಸಂಪರ್ಕ ಸೇತುವೆ
ಕಳೆದೊಂದು ವಾರದಿಂದಲೂ ಪಶ್ಚಿಮಘಟ್ಟದಲ್ಲಿ ಸುರಿದ ಬಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಉಕ್ಕಿ ಹರಿದಿದ್ದಳು, ನೇತ್ರಾವತಿಯ ಆರ್ಭಟಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹಲವಾರು ಜನ ಈ ಜಲ ಪ್ರಳಯಕ್ಕೆ ಮನೆಗಳನ್ನು ಕಳೆದುಕೊಂಡರೆ, ಇನ್ನೂ ಕೆಲವರ ಎಕರೆ ಗಟ್ಟಲೆ ಕೃಷಿ ಭೂಮಿಯೇ ಕೊಚ್ಚಿ ಹೋಗಿದೆ. ಬೆಟ್ಟದಿಂದ ಹರಿದು ಬಂದ ಭಾರೀ ಪ್ರಮಾಣದ ನೀರು ಹಾಗು ಮಣ್ಣು ಪಶ್ಚಿಮಘಟ್ಟದ ಮಡಿಲಲ್ಲೇ ಇರುವ ಬಾಂಜಾರು ಮಲೆ ಎಂಬ ಪ್ರದೇಶದ ಸಂಪರ್ಕ ಹೊರಜಗತ್ತಿನೊಂದಿಗೆ ಸಂಪೂರ್ಣ ಕಡಿತಗೊಂಡಿತ್ತು.
ಜಲ ರಕ್ಕಸನ ಆರ್ಭಟಕ್ಕೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದ ಕಾರಣ ಕಳೆದ ಕೆಲವು ದಿನಗಳಿಂದ ಈ ಭಾಗಕ್ಕೆ ಸಂಪರ್ಕ ಅಸಾಧ್ಯವಾಗಿತ್ತು. ಈ ಕಾರಣ ಇಲ್ಲಿ ವಾಸವಾಗಿದ್ದ ಹಲವಾರು ಕುಟುಂಬಗಳು ತುತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಮುರಿದ ಸೇತುವೆಯ ಸ್ಥಳದಲ್ಲಿ ತಾತ್ಕಾಲಿಕ ಸಂಪರ್ಕ ಸೇತುವೆಯನ್ನು ನಿರ್ಮಿಸಲಾಗಿದ್ದು ಇದರ ಮೂಲಕ ಆ ಭಾಗಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಪೂರೈಲಾಗುತ್ತಿದೆ.
ಸಾಮಾನ್ಯರಂತೆ ಸಹಾಯಕ್ಕೆ ನಿಂತಿದ್ದರು ಗಣಪತಿ ಶಾಸ್ತ್ರಿ
ಈ ನಡುವೆ ಬರ್ಮುಡಾ ಚಡ್ಡಿ ಹಾಕಿಕೊಂಡು ಬಾಂಜಾರು ಮಲೆಯ ಬಂಗಾಡಿಯ ಕೊಲ್ಲಿ ಪ್ರದೇಶಕ್ಕೆ ಬಂದ ಅತ್ಯಂತ ಸರಳ ವ್ಯಕ್ತಿಯೊಬ್ಬರು ಅತ್ತ -ಇತ್ತಕಡೆ ಕೈ ತೋರಿಸಿ ಆ ಕಡೆ ಹೋಗಬೇಡಿ ಅಪಾಯ ಇದೆ ಎಂದು ಎಚ್ಚರಿಸುತ್ತಿದ್ದರು. ಮತ್ತೊಂದು ಕೈಯಲ್ಲಿ ಯಾರ್ಯಾರಿಗೋ ಫೋನ್ ಮೂಲಕ ಸ್ಥಳದ ಗಂಭೀರತೆಯನ್ನು ವಿವರಿಸುತ್ತಾ. ಮಗದೊಮ್ಮೆ ಯಾರಾದರೂ ಅಪಾಯದಲ್ಲಿ ಸಿಲುಕಿದ್ದಾರೆಯೇ ? ಎಂದು ಸ್ಥಳಿಯರಲ್ಲಿ ವಿಚಾರಿಸುತ್ತಾ. ಅತ್ತ ಕಡೆ ಕಾಜೂರಿಗೊಮ್ಮೆ ಇತ್ತಕಡೆ ಕೊಲ್ಲಿಗೊಮ್ಮೆ ಅದೇ ಚಪ್ಪಲ್ ಸವೆಸುತ್ತಾ. ಕುಂದಾಪುರ ಕನ್ನಡದಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಇವನ್ಯಾರು ಅಂತ ಕಂಡು ಹಿಡಿಯುವುದು ಕಷ್ಟ ಆಗಿಬಿಟ್ಟಿತ್ತು.
ಆಗಸ್ಟ್ 15ರಿಂದ ಸೆಪ್ಟೆಂಬರ್ 14ರವರೆಗೆ ಚಾರ್ಮಾಡಿ ಘಾಟ್ ರಸ್ತೆ ಬಂದ್
ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ತಹಶೀಲ್ದಾರ್
ಅಲ್ಲಿಯ ಸ್ಥಳೀಯ ಜನರಿಗೆ ಆ ನಂತರವೇ ಗೊತ್ತಾದದ್ದು ಅವರು ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಎಂದು. ಹಲವಾರು ವರ್ಷ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದ ಬಳಿಕ ತಹಶೀಲ್ದಾರ್ ಹುದ್ದೆಯನ್ನು ಪಡೆದು ಬೆಳ್ತಂಗಡಿ ತಾಲೂಕು ದಂಡಾಧಿಕಾರಿಯಾಗಿ ಗಣಪತಿ ಶಾಸ್ತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರು ಪ್ರವಾಹ ಪೀಡಿತ ಬಾಂಜಾರು ಮಲೆಯ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಸ್ವಯಂ ಸೇವಕರೊಂದಿಗೆ ಬರಿಗಾಲಿನಲ್ಲಿ ತಮ್ಮ ತಲೆ ಮೇಲೆ ಹೊತ್ತು ಖುದ್ದು ಬಾಂಜಾರು ಮಲೆ ತಲುಪಿದ್ದರು. ಸರಕಾರದ ಪರಿಹಾರವನ್ನು ಜನರಿಗೆ ತಲುಪಿಸೋದರ ಜೊತೆಗೆ ಹೊರ ಜಿಲ್ಲೆಗಳಿಂದ ಬರುತ್ತಿದ್ದ ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಗಣಪತಿ ಶಾಸ್ತ್ರಿ ಮಾಡಿದ್ದಾರೆ.ಮಾತ್ರವಲ್ಲ ತಹಶೀಲ್ದಾರ್ ಅವರ ಜೊತೆಗೆ ಅವರ ಕಾರು ಚಾಲಕ ಕೂಡ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ತಹಶೀಲ್ದಾರ್ ಮಾಡಿರೋ ಮಾನವೀಯ ಕಾರ್ಯ ಇದೀಗ ಜನಮೆಚ್ಚುಗೆಗೆ ಕಾರಣವಾಗಿದೆ. ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ನಿಜಕ್ಕೂ ಇದೀಗ ಬಾಂಜಾರು ಮಲೆಯ ಜನರ ಪಾಲಿನ ಹೀರೋ ಆಗಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜನರ ಕಷ್ಟ ಕುಟುಂಬದ ಕಷ್ಟ ಎಂಬಂತೆ ದುಡಿದರು
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾಗಿರೋ ಗಣಪತಿ ಶಾಸ್ತ್ರೀ ಅವರು ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ನೇಮಕವಾದಂದಿನಿಂದಲೂ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ರು. ತಾನೊಬ್ಬ ಅಧಿಕಾರಿ ಅನ್ನೋ ಹಮ್ಮು ಬಿಮ್ಮು ಇಲ್ಲದೇ, ಎಸಿ ರೂಂನಲ್ಲಿ ಕುಳಿತು ಅಧಿಕಾರವನ್ನು ಚಲಾಯಿಸದೇ, ತಾನು ಜನಸೇವಕ ಅನ್ನೋ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ತವ್ಯ ನಿರ್ವಹಣೆ ಜೊತೆಗೆ ಪ್ರವಾಹ ಪೀಡಿತ ಪ್ರದೇಶದ ಜನರ ಕಷ್ಟವನ್ನು ತನ್ನ ಕುಟುಂಬದ ಸದಸ್ಯರಿಗೆ ಬಂದ ಕಷ್ಟ ಎಂದು ಪರಿಗಣಿಸಿ ಹಗಲು ರಾತ್ರಿ ಎನ್ನದೇ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ಗಣಪತಿ ಶಾಸ್ತ್ರಿ ನಿಜವಾದ ಹೀರೋ.