ವೃದ್ಧೆ ಸಂಕಷ್ಟಕ್ಕೆ ಸ್ಪಂದಿಸಿದ ಉತ್ತರ ಕನ್ನಡ ಜಿಲ್ಲಾಡಳಿತ ಭೇಷ್!
ಉತ್ತರ ಕನ್ನಡ, ಜನವರಿ. 06 : ಈಕೆ ಅಂಚೆ ಇಲಾಖೆ ನಿವೃತ್ತ ವೃದ್ಧೆ. ಈಕೆಯ ಅಂಚೆ ಇಲಾಖೆಯಿಂದ ಬರುತ್ತಿದ್ದ ನಿವೃತ್ತಿ ವೇತನಕ್ಕೆ ಕಡ್ಡಾಯವಾಗಿ ಆಧಾರ್ ಅವಶ್ಯಕತೆ ಇದೆ. ಆದ್ರೆ, ಎಲ್ಲೂ ಹೋಗಲು ಆಗದ ಪರಿಸ್ಥತಿಯಲ್ಲಿ ಈ ವೃದ್ಧೆ 6 ವರ್ಷಗಳಿಂದ ಹಾಸಿಗೆ ಹಾಸಿಗೆ ಹಿಡಿದಿದ್ದಾರೆ. ಕಣ್ಣು ಸಹ ಕಾಣುತ್ತಿಲ್ಲ.
ಇಷ್ಟೆಲ್ಲ ಇದ್ದರೂ ಈಕೆಗೆ ಆಧಾರ್ ಕಾರ್ಡ್ ದೊರೆತಿದೆ. ಹೇಗೆ? ಮುಂದೆ ಓದಿ ನಿಮಗೆ ತಿಳಿಯುತ್ತೆ. ಉತ್ತರ ಕನ್ನಡ ಜಿಲ್ಲಾಡಳಿತದ ಕೃಪಾಕಟಾಕ್ಷದಿಂದ ಈ ವೃದ್ಧೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ.
ಹೌದು. ಈ ವೃದ್ಧೆ ಸಂಕಷ್ಟಕ್ಕೆ ಸ್ಪಂದಿಸಿದ ಉತ್ತರ ಕನ್ನಡ ಜಿಲ್ಲಾಡಳಿತ 24 ಗಂಟೆಯಲ್ಲಿ ಆಧಾರ್ ಕಾರ್ಡ್ ಮಾಡಿಸಿ ಕೊಟ್ಟಿದೆ. ಜಿಲ್ಲಾಡಳಿತದ ಈ ಕಾರ್ಯವನ್ನು ಜನರು ಶ್ಲಾಘಿಸುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಎಲ್.ಆರ್.ನಗರದ ನಿವಾಸಿ ಅಂಚೆ ಇಲಾಖೆ ನಿವೃತ್ತ ನೌಕರರಾಗಿರುವ ಕನ್ನಿಕಾ ಈಶ್ವರ ಹೆಗಡೆ ಕಳೆದ ಆರು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಕಣ್ಣುಗಳು ಸಹ ಸಂಪೂರ್ಣ ಕಾಣದಾಗಿದ್ದು ಅವರು ಅತ್ತಿತ್ತ ಚಲಿಸಲಾರದ ಪರಿಸ್ಥಿತಿಯಲ್ಲಿದ್ದಾರೆ.
ಅವರಿಗೆ ಅಂಚೆ ಇಲಾಖೆಯಲ್ಲಿ ಬರುತ್ತಿದ್ದ ನಿವೃತ್ತಿ ವೇತನ ಪಡೆಯಲು ಖಾತೆಗೆ ಇದೀಗ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕಾಗಿದ್ದು, ಅವರ ಬಳಿ ಆಧಾರ್ ಕಾರ್ಡ್ ಇರಲಿಲ್ಲ, ಈ ಹಿನ್ನೆಲೆಯಲ್ಲಿ ನಿವೃತ್ತಿ ವೇತನ ಪಡೆಯುವುದು ದುಸ್ತರವಾಗಿತ್ತು.
ಎಸ್ಎಂಎಸ್ ಮೂಲಕ ಮನವಿ : ಕನ್ನಿಕಾ ಈಶ್ವರ ಹೆಗಡೆ ಅವರ ಪುತ್ರ ರವಿ ಹೆಗಡೆ ಅವರು ಎಸ್ಎಂಎಸ್ ಮೂಲಕ ರಾಜೀವ್ ಗಾಂಧಿ ವಸತಿ ನಿಗಮದ ಡೈರೆಕ್ಟರ್ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಷ್ ಮೌದ್ಗಿಲ್ ಅವರಿಗೆ ಈ ಕುರಿತು ಎಸ್ಎಂಎಸ್ ಮಾಡಿದ್ದರು.
'ನನ್ನ ತಾಯಿ ಹಾಸಿಗೆ ಹಿಡಿದಿರುವುದರಿಂದ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗಿಲ್ಲ. ಹೊನ್ನಾವರದ ಉಪ ಅಂಚೆ ಕಚೇರಿಯಲ್ಲಿ ಅವರ ನಿವೃತ್ತಿ ವೇತನದ ಖಾತೆ ಇದೆ. ಆದಕ್ಕೆ ಆಧಾರ್ ಜೋಡಣೆ ಮಾಡಲು ತೊಂದರೆ ಉಂಟಾಗಿದೆ' ಎಂದು ವಿವರಣೆ ನೀಡಿದ್ದರು.
ಈ ಕುರಿತು ಮುನೀಷ್ ಮೌದ್ಗಿಲ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಅವರಿಗೆ ನೆರವು ನೀಡುವಂತೆ ಸೂಚಿಸಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಅಟಲ್ ಜಿ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಕನ್ನಿಕಾ ಈಶ್ವರ ಹೆಗಡೆ ಅವರ ಮನೆಗೆ ಭೇಟಿ ನೀಡಿ, ಆಧಾರ್ ಕಾರ್ಡ್ ಮಾಡಿಕೊಟ್ಟು ಒಂದು ಕುಟುಂಬದ ಬಾಳಿಗೆ ಬೆಳಕಾಗಿದೆ.