ಬಾವಿಗೆ ಇಳಿಯುವ ಮೊದಲು ಆಳ ನೋಡಿ ಇಳಿಯುವುದು ಉತ್ತಮ
ಮಳೆಗಾಲ ಆರಂಭದ ಮೊದಲು ಬಾವಿಗಳ ಕೆಸರು ತೆಗೆದು ಸ್ವಚ್ಛಗೊಳಿಸದಿದ್ದರೆ ನೀರಿನ ಒರತೆ ಹೆಚ್ಚದು. ಹೀಗಾಗಿ ಕೆಸರು ತೆಗೆಯುವುದೂ ಅನಿವಾರ್ಯ. ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.
ಮಂಗಳೂರು, ಏಪ್ರಿಲ್ 23: ಸುಡುತ್ತಿರುವ ಬಿಸಿಲ ಝಳ ಒಂದೆಡೆಯಾದರೆ ಮತ್ತೊಂದೆಡೆ ಕೆರೆ ಬಾವಿಗಳು ಬತ್ತಿ ಹೋಗಿ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಪರಿಸ್ಥಿತಿ ಎದುರಾಗಿದೆ.
ಮಂಗಳೂರು ನಗರದಾದ್ಯಂತ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕೆರೆ ಬಾವಿಗಳು ಬತ್ತಿ ಹೋಗಿದೆ. ಇದಲ್ಲದೆ ಕೆಲವಡೆ ಬಾವಿಗಳಲ್ಲಿ ತುಂಬಿಕೊಂಡಿರುವ ಕೆಸರು ತೆಗೆದು ಸ್ವ ಚ್ಛಗೊಳಿಸುವ ಕಾರ್ಯ ಶುರುವಾಗಿದೆ. ಆದರೆ, ಈ ಸಂದರ್ಭದಲ್ಲಿ ವಿಷಾನಿಲ ಸೇವಿಸಿ ಬಲಿಯಾಗುವ ಅಪಾಯಗಳೂ ಇವೆ. ಹೀಗಾಗಿ, ಹೂಳು ತೆಗೆಯಲು ಕೆರೆ ಬಾವಿಗಳಿಗೆ ಇಳಿಯುವ ಮುನ್ನ ಎಚ್ಚರವಹಿಸಿ![ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ: ಅನಂತ ಕುಮಾರ್]
ಬೇಸಿಗೆಯಲ್ಲಿ ಬಾವಿಗಳಲ್ಲಿ ಎಷ್ಟು ಅಡಿ ಆಳಕ್ಕೆ ಹೂಳು ತುಂಬಿರುತ್ತದೆ ಎಂಬುವುದನ್ನು ಊಹಿಸಲು ಅಸಾಧ್ಯ. ಕೆಸರಿನ ಮೇಲೆ ಕಸ-ಕಡ್ಡಿ ಬಿದ್ದು ಮುಚ್ಚಿಕೊಂಡಿರುತ್ತದೆ. ಜತೆಗೆ ಕೆಸರಿನೊಂದಿಗೆ ಕಸ-ಕಡ್ಡಿ ಕೊಳೆತು ರಾಸಾಯನಿಕ ಕ್ರಿಯೆಗೆ ಒಳಗಾಗಿವಿಷಾನಿಲ ಸೃಷ್ಟಿಯಾಗಿರುತ್ತದೆ. ಈ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾವಿಯಿಂದ ಕೆಸರು ತೆಗೆಯುವ ವೇಳೆ ಜೀವಹಾನಿ ಸಂಭವಿಸಿದ ನಿದರ್ಶನಗಳಿವೆ.
ಹಾಗಂಥ ಮಳೆಗಾಲ ಆರಂಭದ ಮೊದಲು ಬಾವಿಗಳ ಕೆಸರು ತೆಗೆದು ಸ್ವಚ್ಛಗೊಳಿಸದಿದ್ದರೆ ನೀರಿನ ಒರತೆ ಹೆಚ್ಚದು. ಹೀಗಾಗಿ ಕೆಸರು ತೆಗೆಯುವುದೂ ಅನಿವಾರ್ಯ. ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಈ ಸಲುವಾಗಿ ಒನ್ ಇಂಡಿಯಾ ಕನ್ನಡದಿಂದ ಸಣ್ಣದೊಂದು ವರದಿ.
ವಿಷಾನಿಲದ ಬಗ್ಗೆ ಜಾಗೃತರಾಗಿರಿ
ಎಪ್ರಿಲ್, ಮೇ ತಿಂಗಳಿನಲ್ಲಿ ಮನೆಯವರು ತಾವೇ ಸ್ವತಃ ಇಳಿದು ಬಾವಿಯನ್ನು ಸ್ವತ್ಛಗೊಳಿಸುತ್ತಾರೆ ಅಥವಾ ಕೂಲಿಯಾಳುಗಳನ್ನು ಕರೆಸಿ ಅವರಿಂದ ಹೂಳು ತೆಗೆಸುತ್ತಾರೆ. ಆದರೆ ಅವರಿಗೆ ಬಾವಿಯೊಳಗಿನ ವಿಷಾನಿಲ ಉತ್ಪತ್ತಿ ಬಗ್ಗೆಅರಿವಿರುವುದಿಲ್ಲ.
ಆಳ ನೋಡಿ ಇಳಿಯುವುದು ಉತ್ತಮ
ಬಾವಿಗೆ ಇಳಿಯುವ ಮೊದಲು ಬಾವಿಯ ಆಳ ನೋಡಿ ಇಳಿಯುವುದು ಉತ್ತಮ. ಸಾಮಾನ್ಯವಾಗಿ ಅಳ ಜಾಸ್ತಿ ಇರುವ ಬಾವಿಗಳಲ್ಲಿ ಅಪಾಯ ಅಧಿಕ. ಕರಾವಳಿ ಜಿಲ್ಲೆಗಳ ಒಳ ಪ್ರದೇಶಗಳಲ್ಲಿ ಬಾವಿಗಳು ಸುಮಾರು 100 ಅಡಿಗಿಂತಲೂ ಅಧಿಕ ಆಳವನ್ನು ಹೊಂದಿರುತ್ತವೆ. ಮೇಲಿನಿಂದ ಮಣ್ಣು ಬಿದ್ದು ಅಥವಾ ತಳದಲ್ಲೇ ಕೆಸರು ಸಂಗ್ರಹವಾಗುತ್ತದೆ.
ಒಂದಷ್ಟುವರ್ಷಗಳು ಕಳೆದ ಮೇಲೆ ಒರತೆಗೆ ಇದು ಅಡ್ಡಿಯಾಗಿ ನೀರು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ನಿಂತುಬಿಡುತ್ತದೆ. ತಳವನ್ನು ಸ್ವಚ್ಛಗೊಳಿಸದಿದ್ದರೆ ಒರತೆ ಉಕ್ಕಲು ಅಸಾಧ್ಯ.[ಮಂಗಳೂರಿನಲ್ಲಿ ಮಗುಚಿಬಿದ್ದ ಲಾರಿ: ಚಾಲಕ ಸಾವು]
ಮಿಥೇನ್ ಅನಿಲದ ಎಚ್ಚರಿಕೆ ಇರಲಿ
ಆಳ ಬಾವಿಗಳಲ್ಲಿ ಆಮ್ಲಜನಕದ ಕೊರತೆ ಅಥವಾ ತ್ಯಾಜ್ಯಗಳು ಕೊಳೆತು ಮಿಥೇನ್ ಅನಿಲ ಇರುತ್ತದೆ. ಇವುಗಳಿಗೆ ಇಳಿಯುವಾಗ ಮುಂಜಾಗ್ರತೆ ವಹಿಸಿಬೇಕು. ಅಮ್ಲಜನಕ ಕೊರತೆ ಅಥವಾ ಮಿಥೇನ್ ಅನಿಲ ಇಲ್ಲವೆಂಬುದನ್ನು ಖಾತ್ರಿಪಡಿಸಿ ಕೊಂಡು ಅನಂತರ ಬಾವಿಗೆ ಇಳಿಯಬೇಕು.
ಬಾವಿಗೆ ಇಳಿಯುವಾಗ ಸೊಂಟಕ್ಕೆ ಹಗ್ಗ ಕಟ್ಟಿ ಅದರ ತುದಿಯನ್ನುಮೇಲೆ ಇರುವವರ ಕೈಯಲ್ಲಿ ಕೊಡ ಬೇಕು. ಅರ್ಧಕ್ಕೆ ಹೋಗುವಾಗ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಕಟ್ಟಿದ ಅನುಭವ ಆದರೆ ಮುಂದಕ್ಕೆ ಹೋಗಬಾರದು.
ವಿಷಾನಿಲ ಪತ್ತೆ ಹಚ್ಚುವುದು ಹೇಗೆ?
ಬಾವಿಗೆ ಇಳಿಯುವ ಸಂದರ್ಭ ಬಕೆಟೊಂದರಲ್ಲಿ ದೀಪ ಅಥವಾ ಕ್ಯಾಂಡಲ್ ಉರಿಸಿಟ್ಟು ಬಾವಿಗೆ ಇಳಿಯಬೇಕು. ದೀಪ ಆರಿದರೆ ಅಲ್ಲಿ ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದೆ ಎಂದರ್ಥ. ಹಾಗಾಗಿ ಮುಂದಕ್ಕೆ ಹೋಗದೆ ವಾಪಸ್ಸು ಬರುವುದೇ ಸೂಕ್ತ.
ಬಾವಿಯೊಳಗೆ ವಿಷಾನಿಲ ಇದ್ದರೆ ಮೇಲಿನಿಂದ ಬಾವಿಗೆ ನೀರು ಹಾಕಬೇಕು. ಆಗ ವಿಷಾನಿಲಗಳು ಮೇಲಕ್ಕೆ ಬರುತ್ತದೆ. ಮೇಲಿನಿಂದ ಹಸಿರು ಎಲೆಗಳಿರುವ ಮರದ ಗೆಲ್ಲುಗಳನ್ನು ಹಾಕಿದರೆ ಆಮ್ಲಜನಕದ ಕೊರತೆ ಸ್ವಲ್ಪಮಟ್ಟಿಗೆ ಪರಿಹಾರವಾಗುತ್ತದೆ.[ಮಂಗಳೂರಿನಲ್ಲಿ ಭಜರಂಗ ದಳ ನಾಯಕನ ಅನುಮಾನಾಸ್ಪದ ಸಾವು]
ಅಗ್ನಿ ಶಾಮಕಕ್ಕೆ ಮಾಹಿತಿ ನೀಡಿ
ಬಾವಿಯೊಳಗೆ ವಿಷಾನಿಲ ಇದ್ದರೆ, ಬಾವಿಗಿಳಿಯದೇ ಕೂಡಲೇ 101 ನಂಬರ್ ಡಯಲ್ ಮಾಡಿ ಆಗ್ನಿಶಾಮಕ ದಳವರಿಗೆ ಮಾಹಿತಿ ಕೊಡಬೇಕು. ಅವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಾರೆ. ಅವರಲ್ಲಿ ಉಸಿರಾಟಕ್ಕೆ ಬಳಸುವ ಸಾಧನಗಳಿರುತ್ತವೆ. ಇದಲ್ಲದೆ ಪೈಪ್ ಮೂಲಕ ಬಾವಿಯೊಳಗೆ ಆಮ್ಲಜನಕ ಸರಬರಾಜು ಮಾಡುತ್ತಾರೆ. ಈ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ.