ಸಿಗದ ವೇತನ; ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್ಗೆ ಬೀಗ
ಮಂಗಳೂರು, ಫೆಬ್ರವರಿ 23: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್. ಆದರೆ, ಈಗ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕ್ಯಾಂಟೀನ್ಗೆ ಬೀಗ ಬಿದ್ದಿದೆ.
21 ಸಿಬ್ಬಂದಿಗಳಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಸಿಗದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಬಂಟ್ವಾಳ ಸೇರಿ 3 ಇಂದಿರಾ ಕ್ಯಾಂಟೀನ್ಗಳಿಗೆ ಬೀಗ ಬಿದ್ದಿದೆ. ವೇತನಕ್ಕಾಗಿ ಕಾದು ಕಾದು ಸುಸ್ತಾದ ಸಿಬ್ಬಂದಿ ಕ್ಯಾಂಟೀನ್ ಬಾಗಿಲು ಮುಚ್ಚಿದ್ದಾರೆ.
ಇಂದಿರಾ ಕ್ಯಾಂಟೀನ್ ಕಡೆ ಗಮನಹರಿಸಿ ಸಿಎಂಗೆ ಸಿದ್ದರಾಮಯ್ಯ ಪತ್ರ
ರಾಜ್ಯದಲ್ಲಿನ 130 ಇಂದಿರಾ ಕ್ಯಾಂಟೀನ್ಗಳ ಉಸ್ತುವಾರಿಯನ್ನು ಭಾರತೀಯ ಮಾನವ ಕಲ್ಯಾಣ ಪರಿಷದ್ ನೋಡಿಕೊಳ್ಳುತ್ತದೆ. ಜಿಲ್ಲಾಡಳಿತಗಳು 11 ತಿಂಗಳಿನಿಂದ ಅನುದಾನ ನೀಡಿಲ್ಲ. ನಾವು ಎಷ್ಟು ಭರಿಸಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಪುತ್ತೂರಿನ ಇಂದಿರಾ ಕ್ಯಾಂಟೀನ್ನಲ್ಲಿ ಮಧ್ಯಾಹ್ನ ಸುಮಾರು 500, ಬಂಟ್ವಾಳದಲ್ಲಿ ಸುಮಾರು 300 ಜನರು ಊಟ ಮಾಡುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿಯೂ ಜನರಿಗೆ ಸಹಾಯಕವಾಗಲಿ ಎಂದು ಕ್ಯಾಂಟೀನ್ ನಡೆಸಲಾಗಿತ್ತು.
ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳಲ್ಲಿ ಇಡ್ಲಿ ಸಿಗುತ್ತಿಲ್ಲ!
ಈಗ ಲಾಕ್ ಡೌನ್ ತೆರವು ಬಳಿಕ ಸಾಮಾನ್ಯ ಜನರು, ಕಾಲೇಜು ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿದ್ದರು. ಆದರೆ, ಈಗ ಏಕಾಏಕಿ ಕ್ಯಾಂಟೀನ್ ಬಾಗಿಲು ಮುಚ್ಚಿದ್ದು, ಯಾವಾಗ ತೆರೆಯಲಿದೆ? ಎಂಬುದು ಪ್ರಶ್ನೆಯಾಗಿದೆ.
2020ರ ಅಕ್ಟೋಬರ್ನಲ್ಲಿ ವೇತನ ನೀಡಿದ್ದಾರೆ. ಬಳಿಕ ವೇತನ ಸಿಕ್ಕಿಲ್ಲ. ಸಿಬ್ಬಂದಿಗಳು ಬೇರೆ ದಾರಿ ಕಾಣದೇ ಕ್ಯಾಂಟೀನ್ ಬಂದ್ ಮಾಡಿದ್ದಾರೆ. ಬೆಂಗಳೂರು ನಗರದ 45 ಮತ್ತು ರಾಜ್ಯದ ಇತರ ಜಿಲ್ಲೆಗಳ 85 ಕ್ಯಾಂಟೀನ್ ಸೇರಿ ಒಟ್ಟು 21 ಕೋಟಿ ರೂ. ಸರ್ಕಾರದ ಕಡೆಯಿಂದ ಭಾರತೀಯ ಮಾನವ ಕಲ್ಯಾಣ ಪರಿಷದ್ಗೆ ಬರಬೇಕಿದೆ.
ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಕ್ಯಾಂಟೀನ್ ತೆರೆಯುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಸಮಸ್ಯೆ ಬಗ್ಗೆ ಗಮನ ಹರಿಸಬೇಕಿದೆ.