ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದಾನಂದ ಗೌಡ, ಮೊಯ್ಲಿ ವಿರುದ್ಧ ಜನಾಕ್ರೋಶ
ಮಂಗಳೂರು, ಮೇ 14:ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಜಟಿಲಗೊಳ್ಳುತ್ತಿದ್ದಂತೆ ಜನರ ಆಕ್ರೋಶ ಹೆಚ್ಚಾಗುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಕುಸಿತಕ್ಕೆ ವಿವಾದಿತ ಎತ್ತಿನ ಹೊಳೆ ಯೋಜನೆ ಕಾರಣ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿದೆ.
ಎತ್ತಿನ ಹೊಳೆ ಯೋಜನೆಯ ರುವಾರಿಗಳು ಎಂದೇ ಹೇಳಲಾಗುವ ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಮಾಜಿ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾನರ್ ಆಂದೋಲನ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬರಕ್ಕೆ ಎತ್ತಿನಹೊಳೆ ಯೋಜನೆ ನೇರ ಕಾರಣವಂತೆ!
ಎತ್ತಿನಹೊಳೆ ಯೋಜನೆಯಲ್ಲಿ ಭಾರೀ ಕಮಿಷನ್ ಪಡೆದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸದಾನಂದ ಗೌಡ ಮತ್ತು ವೀರಪ್ಪ ಮೊಯ್ಲಿ ವಿರುದ್ಧವೂ ಕರಾವಳಿಯಲ್ಲಿ ಆಕ್ರೋಶ ಎದ್ದಿತ್ತು.
ಇದೇ ಕಾರಣಕ್ಕೆ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಭಾಗದಲ್ಲಿ ಪ್ರತಿಭಟನೆಯೂ ವ್ಯಕ್ತವಾಗಿತ್ತು.13 ಸಾವಿರ ಕೋಟಿ ಕಮಿಷನ್ ಆಸೆಗೆ ಬಿದ್ದು, ಜಿಲ್ಲೆಯನ್ನು ಬಲಿಕೊಟ್ಟ ಮೊಯ್ಲಿ ಮತ್ತು ಸದಾನಂದ ಗೌಡ ಪಶ್ಚಿಮ ಘಟ್ಟ ಸೇರಿದಂತೆ ನದಿಗಳ ಉಗಮ ಸ್ಥಾನವನ್ನೇ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳೂರಿನಲ್ಲಿ ಎರಡು ದಿನಗಳಿಂದ ಕುಡಿಯುವ ನೀರೇ ಇಲ್ಲ!
ಕರಾವಳಿ ಜನರು ಟಾಯ್ಲೆಟ್ ನೀರನ್ನು ಶುದ್ಧೀಕರಿಸಿ ಕುಡಿಯುವ ಪರಿಸ್ಥಿತಿ ತಂದಿಟ್ಟ ಇವರಿಬ್ಬರಿಗೂ ಸ್ವಾಗತ ಅನ್ನುವ ಧಾಟಿಯಲ್ಲಿ ಬರೆದು ಬ್ಯಾನರ್ ಹಾಕಲಾಗಿದೆ. ಎತ್ತಿನಹೊಳೆ ಕಳ್ಳರಿಗೆ ಈ ಬಾರಿ ಸೋಲು ಖಚಿತ ಅನ್ನುವ ಮಾತು ಕೇಳಿಬರುತ್ತಿದ್ದಂತೆ ಈ ಬ್ಯಾನರ್ ಕಾಣಿಸಿಕೊಂಡಿದೆ. ಇದಲ್ಲದೆ, ಈ ಬಾರಿ ಹೊಸತಾಗಿ ಆಯ್ಕೆಯಾದ ಕರಾವಳಿಯ ಶಾಸಕರು ಎತ್ತಿನಹೊಳೆ ವಿರುದ್ಧ ದನಿಯೆತ್ತಿ ಯೋಜನೆ ನಿಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಕರಾವಳಿಗರಿಗೆ ಕಾಡುತ್ತಿರುವ ನೀರಿನ ಸಮಸ್ಯೆ:ಕೈಗಾರಿಕೆಗಳ ಮೇಲೂ ಎಫೆಕ್ಟ್
40 ಲಕ್ಷ ರೂಪಾಯಿ ಬೆಲೆ ಬಾಳುವ ಕಾರಲ್ಲಿ ಓಡಾಡಲು ಮಾತ್ರ ಶಾಸಕರಾಗಿಲ್ಲ ಅಂತ ಅಣಕವಾಡುವ ಬ್ಯಾನರೂ ಜೊತೆಗಿದೆ. ಮಂಗಳೂರು ನಗರದ ಹಲವೆಡೆ ಇಂಥ ಬ್ಯಾನರ್ ಕಂಡುಬಂದಿದ್ದು, ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರೇ ಈ ಕೆಲಸ ಮಾಡಿರುವ ಸಾಧ್ಯತೆಯಿದೆ.