ಮೂರೇ ದಿನದಲ್ಲಿ ರೆಡಿಯಾಯ್ತು ಬಾಂಜಾರು ಮಲೆ ಸೇತುವೆ
ಮಂಗಳೂರು ಆಗಸ್ಟ್ 20: ಈ ಬಾರಿ ಸುರಿದ ಮಹಾಮಳೆಯ ಪ್ರವಾಹಕ್ಕೆ ಸೇತುವೆ ಕೊಚ್ಚಿಹೋಗಿ ಸಂಪರ್ಕ ಕಡಿದುಕೊಂಡಿದ್ದ ಬಾಂಜಾರು ಮಲೆಗೆ ಮತ್ತೆ ಸೇತುವೆ ನಿರ್ಮಿಸಲಾಗಿದೆ. 53 ವರ್ಷಗಳ ಹಿಂದಿನ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿದುಕೊಂಡಿದ್ದ ಈ ಪ್ರದೇಶಕ್ಕೆ ಜಿಲ್ಲಾಡಳಿತ ಹಾಗೂ ಶಾಸಕ ಹರೀಶ್ಪೂಂಜಾ ಆಶಯದಂತೆ ವಾರದೊಳಗೆ ಕಬ್ಬಿಣದ ಸೇತುವೆ ರಚನೆಯಾಗಿದೆ.
ಪಶ್ಚಿಮಘಟ್ಟ ಸಾಲಿನಲ್ಲಿ ಹೆಚ್ಚಿದೆ ಭೂಕುಸಿತ; ಮೊದಲಿನಂತಾಗುವುದೆ ಬಾಳು?
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಸೂಚನೆಯಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್ ಹಾಗೂ ಸಿಬ್ಬಂದಿ ಕಾರ್ಯ ಯೋಜನೆಯಂತೆ ಪುತ್ತೂರು ಮಾಸ್ಟರ್ ಪ್ಲಾನರಿ ಆನಂದ್ ಅವರು ಕಬ್ಬಿಣದ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ.
ಈ ಬಾರಿ ಸುರಿದ ಮಳೆಗೆ ಅಣಿಯೂರು ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಹಳೆಯ ಸೇತುವೆ ಕೊಚ್ಚಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಬಾಂಜಾರು ಮಲೆ ಎಲ್ಲಾ ಕಡೆಯಿಂದಲೂ ಸಂಪರ್ಕ ಕಳೆದುಕೊಂಡು ಅತಂತ್ರವಾಗಿತ್ತು. ಆದರೆ ಮೂರೇ ದಿನಗಳಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಲಾಗಿದೆ. 5 ಲಕ್ಷ ರೂಪಾಯಿ ವೆಚ್ಚದಲ್ಲಿ 42 ಅಡಿ ಉದ್ದ, 4 ಅಡಿ ಅಗಲದ ವಾಕಿಂಗ್ ಸ್ಟೀಲ್ ಬ್ರಿಜ್ ಸೇತುವೆ ರಚಿಸಲಾಗಿದೆ. ಈ ಸೇತುವೆ ಮೇಲೆ ದ್ವಿಚಕ್ರ ವಾಹನಗಳು ಸಾಗಬಹುದಾಗಿದೆ.