ಶಾಲೆಗಾಗಿ ಚಿನ್ನದ ಬಳೆ ದಾನ ಮಾಡಿದ ಏಳನೇ ತರಗತಿ ಬಾಲಕಿ
ಕಾಸರಗೋಡಿನ ಅರ್ಚನಾ ದಾಸ್ ಎಂಬ ಏಳನೇ ತರಗತಿ ವಿದ್ಯಾರ್ಥಿನಿ ತನ್ನ ಶಾಲೆ ಅಭಿವೃದ್ಧಿಗಾಗಿ ಚಿನ್ನದ ಬಳೆಯನ್ನೇ ದಾನ ಮಾಡಿ, ಎಲ್ಲರ ಮೆಚ್ಚುಗೆಗೆ ಹಾಗೂ ಅಚ್ಚರಿಗೆ ಕಾರಣವಾಗಿದ್ದಾಳೆ
ಮಂಗಳೂರು, ಏಪ್ರಿಲ್ 8: ಈ ಹೆಣ್ಣುಮಗಳ ಹೆಸರು ಅರ್ಚನಾ ದಾಸ್. ಸದ್ಯಕ್ಕೆ ಈಕೆ ಕಾಸರಗೋಡಿನ ಕುಂಬ್ಳೆ ಗೋಲಿಯಾಡ್ಕದಲ್ಲಿ ಇರುವ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ. ಈ ಶಾಲೆಯ ವಾರ್ಷಿಕೋತ್ಸವದ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಯಿತು.
ಅದಕ್ಕೆ ಕಾರಣವಾಗಿದ್ದು ಅರ್ಚನಾ ದಾಸ್. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅರ್ಚನಾ ದಾಸ್ ತನ್ನ ಕೈಯಲ್ಲಿದ್ದ ಚಿನ್ನದ ಬಳೆಯನ್ನು ವೇದಿಕೆಯಲ್ಲಿದ್ದ ಅತಿಥಿಗಳ ಮೂಲಕ ತನ್ನ ಶಾಲೆಯ ಅಭಿವೃದ್ಧಿಗಾಗಿ ದಾನ ಮಾಡಿದ್ದಾಳೆ. ಈ ಹೆಣ್ಣುಮಗಳ ದಿಢೀರ್ ನಿರ್ಧಾರದಿಂದ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.[ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಸೀರೆಯುಟ್ಟು ಮಿಂಚಿದ ಬೆಡಗಿಯರು...]
ಅರ್ಚನಾ ದಾಸ್ ತಾಯಿ ಎಂ. ವಿದ್ಯಾ ಕೂಡ ಇದೇ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಈಕೆಯ ತಂದೆ ಚಿ. ಹರಿದಾಸನ್ ಇದೇ ಊರಿನಲ್ಲಿರುವ ಸರಕಾರಿ ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಮಾದರಿ ಎನಿಸಿ, ಈ ಬಗ್ಗೆಯೇ ಮಾತನಾಡುವಂತಾಗಿದೆ.