ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿಯಲ್ಲಿ ಅನ್ಯಧರ್ಮಿಯರ ಅಂಗಡಿಗಳಿಗೆ ನಿಷೇಧ
ದಕ್ಷಿಣ ಕನ್ನಡ, ನ. 24: ರಾಜ್ಯದಲ್ಲಿ ಕಳೆದೊಂದು ವರ್ಷದ ಹಿಂದೆ ಜಾತ್ರೆಗಳು, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಅನ್ಯಧರ್ಮಿಯರು ಅಂಗಡಿ ಮಳಿಗೆಗಳನ್ನು ಹಾಕಬಾರದು ಎಂಬ ಪೋಸ್ಟರ್ಗಳು ಕಾಣಿಸಿಕೊಂಡಿದ್ದವು. ಈಗ ಮತ್ತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೋಸ್ಟರ್ ಕಾಣಿಸಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಚಂಪಾ ಷಷ್ಟಿಯಂದು ಹಿಂದೂಯೇತರರ ವ್ಯಾಪಾರವನ್ನು ನಿಷೇಧಿಸಿ ಸುಬ್ರಹ್ಮಣ್ಯದ ಹಿಂದೂ ಜಾಗರಣ ವೇದಿಕೆ ಘಟಕ ಪೋಸ್ಟರ್ ಅಂಟಿಸಿದೆ.
ಚಿತ್ರದುರ್ಗ: ನೂರಾರು ವರ್ಷಗಳ ಶ್ರೀರಾಮನ ದೇವಾಲಯ ನೆಲಸಮ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 'ಚಂಪಾ ಷಷ್ಠಿ' ಸಂದರ್ಭದಲ್ಲಿ ಹಿಂದೂ ಸಮುದಾಯದವರು ಬಿಟ್ಟು ಇತರೆ ಸಮುದಾಯದವರು ಅಂಗಡಿ ಮುಂಗಟ್ಟುಗಳನ್ನು ಹಾಕಬಾರದು ಎಂದು ಪೋಸ್ಟರ್ ಹಾಕಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠೀಯ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಪ್ರತೀ ವರ್ಷ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಜಾತಿ ಧರ್ಮದವರೂ ವ್ಯಾಪಾರ ನಡೆಸುತ್ತಿದ್ದರು. ಆದರೆ ಈ ಬಾರಿ ಹಿಂದೂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ವ್ಯಾಪಾರ ನಿಷೇಧಿಸಲು ಪ್ರಯತ್ನಿಸಿದ್ದಾರೆ.
Karnataka | Hindu Jagaran Vedike put up a poster announcing the banning of other communities' shops and stalls during the 'Champa Shashti' of the Kukke Subrahmanya Temple in Subramanya of Dakshina Kannada district. pic.twitter.com/HGswvSk0i9
— ANI (@ANI) November 24, 2022
ಈ ಹಿಂದೆಯೂ ಹಲವು ಜಾತ್ರಾ ಮಹೋತ್ಸವಗಳಲ್ಲಿ ಅನ್ಯಧರ್ಮಿಯರಿಗೆ ನಿಷೇಧ ಹೇರಿದ್ದ ಘಟನೆಗಳು ವರದಿಯಾಗಿದ್ದವು. ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರ ಮತ್ತು ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಜಾತ್ರೆಯಲ್ಲಿಯೂ ಅನ್ಯಧರ್ಮಿಯರಿಗೆ ವ್ಯಾಪಾರ ಮಾಡಲು ನಿಷೇಧ ಹೇರಲಾಗಿತ್ತು. ಮುಸ್ಲೀಂ ವ್ಯಾಪಾರಿಗಳನ್ನು ನಿರ್ಬಂಧಿಸುವಂತೆ ಹಿಂದೂ ಸಂಘಟನೆಗಳು ಕೊಲ್ಲೂರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದವು.
ಇನ್ನು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೆನ್ನಕೇಶವ ಜಾತ್ರೆಯಲ್ಲಿಯೂ ಅನ್ಯಧರ್ಮಿಯ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 'ನಮ್ಮ ಹಾಸನ ಜಿಲ್ಲೆಯಲ್ಲಿ ಯಾವ ಜಾತ್ರೆಯಲ್ಲೂ ಮುಸ್ಲಿಂಮರಿಗೆ ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ. ಚೆನ್ನಕೇಶವ ಜಾತ್ರೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ" ಎಂದಿದ್ದರು.