ಮಂಗಳೂರು: ಮುಸ್ಲಿಂ ಭಕ್ತನಿಗೆ ಒಲಿದ ಕೊರಗಜ್ಜ; ನಿತ್ಯ ಸ್ವಾಮಿಯ ಪೂಜೆ
ಮಂಗಳೂರು, ಏಪ್ರಿಲ್ 7: ದಕ್ಷಿಣ ಕನ್ನಡ ಜಿಲ್ಲೆಯ ಜನ ಶ್ರದ್ಧಾ ಭಕ್ತಿಯಿಂದ ನಂಬುವ ಕೊರಗಜ್ಜ ದೈವದ ಶಕ್ತಿ ಅತೀತವಾಗಿದ್ದು, ಕೊರಗಜ್ಜನನ್ನು ನಂಬುವ ಜನರ ಇಷ್ಟಾರ್ಥ ಸಿದ್ಧಿ ಮಾಡಿ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ದೂರ ಮಾಡುತ್ತಾನೆ ಎನ್ನುವ ನಂಬಿಕೆ ಕರಾವಳಿ ಜನರಲ್ಲಿದೆ.
ಜಾತಿ, ಮತ, ಬೇಧ ಮೀರಿ ಕರಾವಳಿಯಲ್ಲಿ ಜನ ಕೊರಗಜ್ಜನನ್ನು ನಂಬುತ್ತಾರೆ ಅನ್ನೋದಕ್ಕೆ ಈ ಭಕ್ತನ ನಿಷ್ಕಲ್ಮಶ ಭಕ್ತಿಯೇ ನಿದರ್ಶನವಾಗಿದೆ.
ಕೊರಗಜ್ಜ ದೇವಸ್ಥಾನ ಆಯ್ತು, ಇದೀಗ ಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ
ಮಂಗಳೂರಿನ ಮುಲ್ಕಿಯ ಬಳ್ಕುಂಜೆ ಗ್ರಾಮದ 65ರ ಹರೆಯ ಪಿ.ಖಾಸಿಂ ಸಾಹೇಬ್ ಕೊರಗಜ್ಜನ ಪ್ರಿಯ ಭಕ್ತನಾಗಿ ಸೇವೆ ಮಾಡುತ್ತಿದ್ದಾರೆ. ಬಳ್ಕುಂಜೆ ಕವತ್ತಾರು ಎಂಬಲ್ಲಿ 19 ವರ್ಷಗಳಿಂದ ಕೊರಗಜ್ಜನ ಆರಾಧನೆ ಮಾಡುತ್ತಿರುವ ಖಾಸಿಂ, ತಾವೊಬ್ಬ ಮುಸ್ಲಿಂ ಆದರೂ ಕೊರಗಜ್ಜನನ್ನು ಆರಾಧಿಸುತ್ತಾರೆ.
ಮೂಲತಃ ಕೇರಳದ ಪಾಲಕ್ಕಾಡ್ ಮೂಲದವರಾಗಿರುವ ಖಾಸಿಂ ಸಾಹೇಬ್, 35 ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದರು. ಮರದ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಮುಲ್ಕಿಯಲ್ಲೇ ಮದುವೆಯಾಗಿ ಐವರು ಮಕ್ಕಳ ಜೊತೆ ಸರ್ಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದಾರೆ.
ಆದರೆ ಕಾಲ ಕ್ರಮೇಣ ಖಾಸಿಂ ಸಾಹೇಬ್ ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡಲಾರಂಭಿಸಿದವು. ಮಗ ತೀವ್ರ ಅನಾರೋಗ್ಯಕ್ಕೀಡಾದರೆ, ಹೆಣ್ಣು ಮಕ್ಕಳಿಗೆ ಮದುವೆ ನೆಂಟಸ್ಥಿಕೆಗಳು ಕೂಡಿ ಬರದೆ ತುಂಬಾ ತೊಂದರೆಗೊಳಗಾದರು. ಅಲ್ಲದೆ ಖಾಸಿಂ ಸಾಹೇಬ್ ರವರ ಕಾಲು ಊನವಾಗಿ ನಡೆಯಲಾರದ ಪರಿಸ್ಥಿತಿಯೂ ಬಂತು.
ತನ್ನ ಕುಟುಂಬದಲ್ಲಾಗುತ್ತಿರುವ ಅಸಾಧಾರಣ ಸಮಸ್ಯೆಗಳ ಬಗ್ಗೆ ಕೇರಳದ ಜ್ಯೋತಿಷ್ಯ ಶಾಸ್ತ್ರ ಮೂಲಕ ಪರಿಹಾರ ಕೇಳಿದಾಗ, ಖಾಸಿಂ ಸಾಹೇಬ್ ನೆಲೆಸಿರುವ ಜಾಗ ಅದು ಕೊರಗಜ್ಜನನ ನೆಲೆ ಅಂತಾ ಗೊತ್ತಾಯಿತು. ಕೊರಗಜ್ಜನಿಗೆ ಸೇರಿದ ಜಾಗ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಕೊರಗಜ್ಜನನ್ನು ನಂಬಬೇಕೆಂಬ ಪರಿಹಾರ ಕಂಡುಬಂದಿತು.
ಬೇರೆ ದಾರಿ ಇಲ್ಲದೆ ಖಾಸಿಂ ಸಾಹೇಬರು ಕೊರಗಜ್ಜನನ್ನು ನಂಬಲು ಆರಂಭಿಸಿದರು. ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡುವ ಖಾಸಿಂ ಸಾಹೇಬರು, ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಾರೆ.
ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಖಾಸಿಂ ಸಾಹೇಬರು ಆರಾಧಿಸುತ್ತಾರೆ. ಖಾಸಿಂರ ದೈವ ಸ್ಥಾನದಲ್ಲಿ ಕೊರಗಜ್ಜನಿಗೆ ನಿತ್ಯ ದೀಪ ಸೇವೆ, ಸಂಕ್ರಾಂತಿಯ ವಿಶೇಷ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲಾ ಧರ್ಮದ ಭಕ್ತರು ಜಾತಿ-ಭೇದವಿಲ್ಲದೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ.