ಸರಳವಾಗಿ ಬಕ್ರೀದ್ ಆಚರಿಸಿದ ಕರಾವಳಿ ಮುಸ್ಲಿಮರು
ಮಂಗಳೂರು, ಆಗಸ್ಟ್ 12: ಪ್ರವಾಹ ಹಿನ್ನೆಲೆಯಲ್ಲಿ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿದರು. ಮಂಗಳೂರು ನಗರ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬದಲ್ಲಿ ಸರಳವಾಗಿ ಸಾಮೂಹಿಕ ನಮಾಝ್ ನೆರವೇರಿಸಿ ಆಚರಿಸಿದರು.
ಮಂಗಳೂರಿನ ಬಾವುಟಗುಡ್ಡೆ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಶಾಸಕ ಯುಟಿ ಖಾದರ್ ಭಾಗವಹಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ನೆರೆಯಿಂದ ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಇನ್ಮುಂದೆ ಇಂತಹ ಅನಾಹುತಗಳು ನಡೆಯದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ" ಎಂದರು.
ಬಕ್ರೀದ್ ವಿಶೇಷ: ಮೈಸೂರಿನಲ್ಲಿ 7 ಸಾವಿರದಿಂದ 80 ಸಾವಿರದ ತನಕ ಕುರಿ ಮಾರಾಟಕ್ಕೆ
ಬಾವುಟ ಗುಡ್ಡ ಈದ್ಗಾ ಮಸೀದಿಗೆ ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಡಾ. ಹರ್ಷ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಮಕ್ಕಳು ಸೇರಿದಂತೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
ಉಡುಪಿ ಜಾಮೀಯ ಮಸೀದಿಯ ವೌಲಾನ ಅಬ್ದುರ್ರಶೀದ್ ನದ್ವಿ ಮತ್ತು ಉಡುಪಿ ಅಂಜುಮಾನ್ ಮಸೀದಿಯ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ಈದ್ ನಮಾಝ್ ನಡೆಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳು ಈದ್ ಸಂದೇಶ ನೀಡಿದರು.