ಮಂಗ್ಳೂರು: ದಿಲ್ವಾಲೆ ಸಿನಿಮಾ ಪ್ರದರ್ಶನ ವಿರೋಧಿಸಿದ ಬಜರಂಗದಳ
ಮಂಗಳೂರು, ಡಿಸೆಂಬರ್, 21: ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ನಟ ಶಾರುಖ್ ಖಾನ್ ಅಭಿನಯದ ದಿಲ್ ವಾಲೆ ಚಿತ್ರ ಪ್ರದರ್ಶನ ವಿರೋಧಿಸಿದ ಬಜರಂಗದಳ ಕಾರ್ಯಕರ್ತರು ಮಂಗಳೂರಿನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದು, ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದರು.
ಮಂಗಳೂರಿನ ಬಿಜೈನ ಭಾರತ್ ಮಾಲ್ ನ ಬಿಗ್ ಸಿನೆಮಾಸ್ ಎದುರು ಪ್ರತಿಭಟನೆ ನಡೆಸಿದ ಬಜರಂಗದಳದ ಕಾರ್ಯಕರ್ತರು ಚಿತ್ರ ಪ್ರದರ್ಶಿಸದಂತೆ ಆಗ್ರಹಿಸಿದ್ದಾರೆ. ಫಿಝಾ ಫೋರಂ ಮಾಲ್ ನ ಪಿವಿಆರ್, ಸಿಟಿ ಸೆಂಟರ್ನ ಸಿನಿಪೋಲಿಸ್ ನಲ್ಲೂ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ.[ಅಸಹಿಷ್ಣುತೆ ಮಾತನಾಡಿದ್ದ ಶಾರುಖ್ ದಿಲ್ವಾಲೆಗೆ ಚಲ್ ರೇ ಎಂದ ಪ್ರೇಕ್ಷಕ!]
ಚಿತ್ರಮಂದಿರದ ವ್ಯವಸ್ಥಾಪಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಸಿನೆಮಾ ಪ್ರದರ್ಶನ ಮಾಡುವುದಿಲ್ಲ ಎಂದು ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸಿದ ಬಜರಂಗದಳ ಕಾರ್ಯಕರ್ತರು, 'ಮಂಗಳೂರಿನಲ್ಲಿ ಬಾಲಿವುಡ್ ನಟರಾದ ಆಮಿರ್ ಖಾನ್ ಮತ್ತು ಶಾರುಕ್ ಖಾನ್ರ ಯಾವ ಚಿತ್ರ ಪ್ರದರ್ಶನಕ್ಕೂ ಅವಕಾಶ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.[ಸಾಮಾಜಿಕ ತಾಣದಲ್ಲಿ ಪರ ವಿರೋಧದ ಅಲೆ ಎಬ್ಬಿಸಿದ ದಿಲ್ವಾಲೆ]
ನಟ ಶಾರುಖ್ ಖಾನ್ ಹೇಳಿದ್ದೇನು?
ನಟ ಶಾರುಖ್ ಖಾನ್ ತಮ್ಮ ಹುಟ್ಟಿದ ದಿನದಂದು' ಭಾರತ ಸ್ವಲ್ಪ ಮಟ್ಟಿಗೆ ಅಸಹಿಷ್ಣುವಾಗಿದೆ' ಎಂದು ಹೇಳಿ ಇಲ್ಲದ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಬಳಿಕ ದಿಲ್ವಾಲ್ ಚಲನಚಿತ್ರ ಪ್ರದರ್ಶನವಾಗುವ ಮುನ್ನ ದಿನ ಕ್ಷಮೆ ಯಾಚಿಸಿದ್ದರು.