ಯುವಕರೇ ಹುಷಾರ್, ಉದ್ಯೊಗದ ಆಮಿಷವೊಡ್ಡಿ ಹೀಗೂ ವಂಚಿಸುತ್ತಾರೆ!
ಮಂಗಳೂರು, ಮೇ 09:ಪ್ರತಿಷ್ಠಿತ ಕಂಪನಿಯ ಹೆಸರಲ್ಲಿ ಉದ್ಯೋಗ ಆಮಿಷ ಒಡ್ಡಿ ಹಲವರಿಗೆ ವಂಚಿಸಿದ ಯುವಕನೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪ್ರತಿಷ್ಠಿತ ಓಎನ್'ಜಿಸಿ ಕಂಪನಿಯಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ 22.75 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಆರೋಪದಲ್ಲಿ ಪಡುಪೆರಾರ ನಿವಾಸಿ ರಾಮ್ಪ್ರಸಾದ್ ರಾವ್ ನನ್ನು ಬಜ್ಪೆ ಪೊಲೀಸರು ಮೂಡುಪೆರಾರ ಎಂಬಲ್ಲಿ ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಟಾರ್ಗೆಟ್ ಗ್ಯಾಂಗ್ ಮತ್ತೆ ಸಕ್ರಿಯ:ಕೊಲೆ ಬೆದರಿಕೆ, ಇಬ್ಬರ ಬಂಧನ
ರಾಮ್ಪ್ರಸಾದ್ ಓಎನ್'ಜಿಸಿ ಪೆಟ್ರೊಕೆಮಿಕಲ್ ಕಂಪೆನಿಯಲ್ಲಿ ಎಚ್ಆರ್ ಅಧಿಕಾರಿ ಎಂದು ಹೇಳಿಕೊಂಡು ಹಲವಾರು ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿದ್ದ ಎಂದು ಆರೋಪಿಸಲಾಗಿದೆ. ಒಟ್ಟು 13 ಯುವಕರಿಂದ 22.75 ಲಕ್ಷ ರೂಪಾಯಿಯನ್ನು ಅರೋಪಿ ರಾಮ್ ಪ್ರಸಾದ್ ರಾವ್ ಪಡೆದುಕೊಂಡಿದ್ದ.
ಈತ ಕಂಪನಿಯ ಎಚ್ಆರ್ ಎಂಬಂತೆ ನಕಲಿ ಐಡೆಂಟಿಟಿ ಕಾರ್ಡ್ ಮತ್ತು ಮುದ್ರೆ ತಯಾರಿಸಿದ್ದ. ಕಂಪನಿಯ ನಕಲಿ ಲೋಗೊ ಹಾಗೂ ಉದ್ಯೋಗದ ಅರ್ಜಿಯನ್ನು ತಯಾರಿಸಿ ಯುವಕರಿಂದ ಹಣ ಪಡೆದು ಅರ್ಜಿಗಳನ್ನು ಹಂಚಿದ್ದ. ತಾನೇ ನಕಲಿ ಇ-ಮೇಲ್ ಸೃಷ್ಟಿಸಿ ಅರ್ಜಿಗಳನ್ನು ತರಿಸಿಕೊಂಡಿದ್ದ. ಕಂಪನಿಯ ಪ್ರಧಾನ ವ್ಯವಸ್ಥಾಪಕರ ಹೆಸರಲ್ಲಿ ಸೀಲ್ ಹಾಕಿ ಯುವಕರಿಗೆ ನೇಮಕಾತಿ ಪತ್ರಗಳನ್ನೂ ಕಳುಹಿಸಿ ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ.
ಬಂಧಿತನಿಂದ ಕೃತ್ಯಕ್ಕೆ ಬಳಸಿದ ಸಿಪಿಯು-ಕೀಬೋರ್ಡ್, ಎಲ್ಇಡಿ ಮಾನಿಟರ್, ಕಲರ್ ಪ್ರಿಂಟರ್, ನಕಲಿ ಸೀಲ್ಗಳು, ನಕಲಿ ಐಡೆಂಟಿಟಿ ಕಾರ್ಡ್, ಮೊಬೈಲ್ ಹಾಗೂ ಸಿಮ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.