ಹೊನ್ನ ಕಲಶದಲ್ಲಿ ಶೋಭಿಸಿದ ವಿರಾಟ್ ವಿರಾಗಿ: ನಾಳೆ ಕೊನೆ ದಿನದ ಮಜ್ಜನ
ಮಂಗಳೂರು, ಫೆಬ್ರವರಿ 17:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಯ ಮಸ್ತಕಾಭಿಷೇಕ ಉತ್ಸವದ ಕಳೆಗಟ್ಟಿದೆ. 12 ವರ್ಷಗಳಿಗೊಮ್ಮೆ ನಡೆಯುವ ಮಸ್ತಕಾಭಿಷೇಕ ಸಂಭ್ರಮ ಕಣ್ತುಂಬಿಸಿಕೊಳ್ಳಲು ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ.
ಎರಡನೇ ದಿನವೂ ಅಭಿಷೇಕದಲ್ಲಿ ವಿವಿಧ ದ್ರವ್ಯಗಳ ಕಲಶದೊಂದಿಗೆ ಭಗವಾನ್ ಬಾಹುಬಲಿ ಹೊಂಬಣ್ಣದಲ್ಲಿ ಶೋಭಿಸಿದ್ದಾನೆ. ಚಂದನ, ಕ್ಷೀರ ಸಾಗರದಲ್ಲಿ ಭಗವಾನ್ ಬಾಹುಬಲಿ ಮಿಂದೆದಿದ್ದು ಕಂಡುಬಂತು.
ಬಾಹುಬಲಿ ಮಹಾಮಜ್ಜನ ನೋಡಲು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರ ದಂಡು
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಿತ ಭಗವಾನ್ ಬಾಹುಬಲಿಗೆ ಈ ಬಾರಿ ನಾಲ್ಕನೇ ಮಹಾಮಸ್ತಕಾಭಿಷೇಕದ ಪರ್ಯಾಯ. 12 ವರ್ಷಗಳ ಆವರ್ತನದ ದ್ರವ್ಯಾಭಿಷೇಕದ ಕೊನೆಯ ಅಂಕ ಪ್ರವೇಶ ಮಾಡಿದ್ದು ಸುಡುವ ಸೂರ್ಯ ಕಿರಣಗಳ ಮಧ್ಯೆ ಬಾಹುಬಲಿ ಹೊಂಬಣ್ಣದಲ್ಲಿ ಶೋಭಿಸಿದ್ದಾನೆ.
ಬೆಳಗ್ಗೆ ಜಲಾಭಿಷೇಕ, ಕ್ಷೀರಧಾರೆಯೊಂದಿಗೆ ಆರಂಭಗೊಂಡ ಅಭಿಷೇಕಕ್ಕೆ ಜೈನ ಸ್ವಾಮಿಗಳು ಸಾಥ್ ನೀಡಿದರು. ಬಳಿಕ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಜೈನ ಭಕ್ತರು ಅಟ್ಟಳಿಗೆ ಏರಿ, ನಿಗದಿಪಡಿಸಿದ ದ್ರವ್ಯಗಳನ್ನು ಸರ್ವಪರಿತ್ಯಾಗಿಯ ಶಿಖರಕ್ಕೆ ಧಾರೆ ಎರೆಯುತ್ತಾ ಮಹಾಮಜ್ಜನದಲ್ಲಿ ಕೈಜೋಡಿಸಿದರು.1008 ಕಲಶಗಳ ಜಲಾಭಿಷೇಕದ ಒಡನೆಯೇ ಬಿದ್ದ ಕ್ಷೀರಧಾರೆ ಬಾಹುಬಲಿ ಶ್ವೇತಧಾರಿಯಾಗಿ ಕಂಗೊಳಿಸುವಂತೆ ಮಾಡಿತ್ತು.
ಧರ್ಮಸ್ಥಳದಲ್ಲಿ ಅನಾವರಣಗೊಂಡ ಭರತ ಚಕ್ರವರ್ತಿ ದಿಗ್ವಿಜಯ ಯಾತ್ರೆ
ಶ್ರೀಗಂಧ, ಚಂದನ, ಸೀಯಾಳ, ಕಬ್ಬಿನ ಹಾಲು, ಶ್ವೇತ ಕಲ್ಕ ಚೂರ್ಣ ಸೇರಿ ಅಷ್ಟ ದ್ರವ್ಯಗಳ ಅಭಿಷೇಕ ನಡೆಯಿತು. ಅರಿಶಿನ ಮತ್ತು ಚಂದನದ ಅಭಿಷೇಕ ಬಾಹುಬಲಿಯನ್ನು ಸುಡುತ್ತಿದ್ದ ಬಿಸಿಲು ಕಣ್ಣು ಕೋರೈಸುವಂತೆ ಮಾಡಿತ್ತು. ಮುಂದೆ ಓದಿ..
ವಿಶೇಷತೆಯನ್ನು ಪಡೆದ ಅಷ್ಟ ದ್ರವ್ಯಗಳು
ಸೂರ್ಯ ಉತ್ತರಾಯಣಕ್ಕೆ ಸರಿದ ಬಳಿಕ ಕರಾವಳಿಯಲ್ಲಿ ಬೇಸಗೆಯ ಧಗೆ. ಜೊತೆಗೆ ಕಣ್ಣು ಕೋರೈಸುವ ಧವಳ ರೇಖೆಗಳು ಭುವಿಯನ್ನು ಮುತ್ತಿಕ್ಕುತ್ತವೆ. ಇಂತಹ ಸಂಕೀರ್ಣ ಘಟ್ಟದಲ್ಲಿ ನಡೆಯುವ ವಿವಿಧ ದ್ರವ್ಯಗಳ ಅಭಿಷೇಕ ಕಲ್ಲಿನ ಮೂರ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತೆ. ಬಿಸಿಲ ಹೊಡೆತದಿಂದ ಹೊಳಪು ಕಳಕೊಂಡ ಮೂರ್ತಿಗೆ 12 ವರ್ಷಗಳ ಆವರ್ತನದ ಮಹಾಮಜ್ಜನ ಮೂರ್ತ ರೂಪ ನೀಡುತ್ತೆ.ಇಂಥ ವೈಜ್ಞಾನಿಕ ಹಿನ್ನೆಲೆಯೂ ಈ ಮಸ್ತಕಾಭಿಷೇಕದ ಹಿಂದಿದೆ.ಬಾಹುಬಲಿಗೆ ಸಿದ್ದಪಡಿಸಲಾದ ಅಷ್ಟ ದ್ರವ್ಯಗಳು ವಿಶೇಷತೆಯನ್ನು ಪಡೆದಿವೆ.
ಕಾಶ್ಮೀರದಿಂದ ತಂದ ಕೇಸರಿ
ಕೈಯಿಂದಲೇ ಶ್ರೀಗಂಧದ ಕೊಡಿನಿಂದ ಅರೆದ ದ್ರವ್ಯ, ಕಾಶ್ಮೀರದಿಂದ ತಂದ ಶುದ್ದ ಕೇಸರಿಯೂ ಬಾಹುಬಲಿಯ ಅಭಿಷೇಕದ ಕಾಂತಿಯನ್ನು ಹೆಚ್ಚಿಸಿದವು.ಕಾಶ್ಮೀರದಿಂದ ತಂದ ಕೇಸರಿಯನ್ನು ಬಾಹುಬಲಿಗೆ ಅರ್ಪಿಸುವ ಮೂಲಕ ಭಾರತದ ಶಿರ ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಬಾಹುಬಲಿಗೆ ಅಭಿಷೇಕ ಸಲ್ಲಿಸಲಾಯಿತು
ಬಾಹುಬಲಿ ಮಹಾಮಸ್ತಕಾಭಿಷೇಕ:ಧರ್ಮಸ್ಥಳಕ್ಕೆ ಹರಿದುಬರುತ್ತಿದೆ ಭಕ್ತರ ದಂಡು
ಹೆಗ್ಗಡೆಯವರ ಕಾರ್ಯ ರಾಜ್ಯಕ್ಕೆ ಮಾದರಿ
ಇನ್ನು ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಭಾಗವಹಿಸಿದ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ರಾಜ್ಯ ಸರ್ಕಾರ ಮಹಾಮಸ್ತಕಾಭಿಷೇಕಕ್ಕೆ ಸಂಪೂರ್ಣ ನೆರವು ನೀಡಿದ್ದು, ಹೆಗ್ಗಡೆಯವರ ಅಚ್ಚುಕಟ್ಟಿನ ಕಾರ್ಯ ರಾಜ್ಯಕ್ಕೆ ಮಾದರಿ ಎಂದು ಶ್ಲಾಘಿಸಿದರು.
ನಾಳೆ ಕೊನೆಯ ಅಭಿಷೇಕ
ಒಟ್ಟಿನಲ್ಲಿ ಕಳೆದ ಒಂಭತ್ತು ದಿನಗಳಿಂದ ಪೂಜಾ ವಿಧಿವಿಧಾನ ಸಂಭ್ರಮದ ನಡುವೆ ಕಳೆಗಟ್ಟಿದ್ದ ಧರ್ಮಸ್ಥಳದ ಬಾಹುಬಲಿಗೆ ನಾಳೆ ಕೊನೆಯ ಅಭಿಷೇಕ ನಡೆಯಲಿದೆ. ದೇಶ , ವಿದೇಶದಿಂದ ಆಗಮಿಸಿದ ಭಕ್ತರು ರಕ್ತವರ್ಣದಲ್ಲಿ ಶೋಭಿತ ವಿರಾಟ್ ಮೂರ್ತಿಯ ಅಪೂರ್ವ ಕ್ಷಣಗಳನ್ನು ಮಸ್ತಕದಲ್ಲಿ ತುಂಬಿಕೊಳ್ಳುತ್ತಿದ್ದಾರೆ.