ಬಾಹುಬಲಿ ಮಹಾಮಜ್ಜನ ನೋಡಲು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರ ದಂಡು
ಮಂಗಳೂರು, ಫೆಬ್ರವರಿ 17: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಗೆ ಮಹಾಮಜ್ಜನ ಆರಂಭವಾಗಿದೆ. ಶನಿವಾರದಿಂದ ಮೂರು ದಿನಗಳ ಕಾಲ ಭಗವಾನ್ ಬಾಹುಬಲಿಯ ಮಹಾಮಜ್ಜನ ನಡೆಯಲಿದೆ. ತ್ಯಾಗ ಮೂರ್ತಿಯ ಮಹಾಮಜ್ಜನ ಕಣ್ತುಂಬಿಸಿಕೊಳ್ಳಲೆಂದೇ ಸಹಸ್ರಾರು ಭಕ್ತರು ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಇಂದು ಮೊದಲ ದಿನ ಮಹಾಮಸ್ತಕಾಭಿಷೇಕದಲ್ಲಿ ವಿವಿಧ ದ್ರವ್ಯಗಳ ಮೂಲಕ ಭಗವಾನ್ ಬಾಹುಬಲಿಯನ್ನು ಪೂಜಿಸಲಾಯಿತು.
ಧರ್ಮಸ್ಥಳದಲ್ಲಿ ನಡೆಯುತ್ತಿದೆ ಬಾಹುಬಲಿ ಮಹಾ ಮಜ್ಜನ
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾಗಿರುವ ಭಗವಾನ್ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, ಕಳೆದ 8 ದಿನಗಳಿಂದ ಪಂಚಮಹಾವೈಭವ ಹಾಗೂ ವಿವಿಧ ಕಾರ್ಯಕ್ರಮಗಳ ಬಳಿಕ ಇಂದು ಮಹಾಮಜ್ಜನ ಆರಂಭವಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಹಾಗೂ ಕುಟುಂಬಿಕರು ಬಾಹುಬಲಿಗೆ ಜಲಾಭಿಷೇಕ ಮಾಡುವ ಮೂಲಕ ಮಹಾಮಜ್ಜನಕ್ಕೆ ಚಾಲನೆ ದೊರೆಯಿತು.
ಧರ್ಮಸ್ಥಳದಲ್ಲಿ ಅನಾವರಣಗೊಂಡ ಭರತ ಚಕ್ರವರ್ತಿ ದಿಗ್ವಿಜಯ ಯಾತ್ರೆ
ಸಂಪ್ರದಾಯದಂತೆ ಹದಿನಾರು ನದಿಗಳಿಂದ ತರಲಾದ ನೀರನ್ನು 1008 ಕಲಶಗಳ ಮೂಲಕ ಜೈನ ಸಮುದಾಯದ ಭಕ್ತರು ಅಭಿಷೇಕ ನಡೆಸಿದರು. ಬಳಿಕ ಕ್ಷೀರಾಭಿಷೇಕ, ಹರಿತ, ಶ್ರೀಗಂಧ, ಅಷ್ಟಚಂದನ, ಚಂದನ, ಸೀಯಾಳ, ಕಬ್ಬಿನ ಹಾಲು, ಶ್ವೇತ ಕಲ್ಕ ಚೂರ್ಣ, ಶಾಂತಿಧಾರ ಒಳಗೊಂಡಿರುವ ದ್ರವ್ಯಾಭಿಷೇಕ ನಡೆಸಲಾಯಿತು.ಇನ್ನು ಮಜ್ಜನಕ್ಕೆ ಬೇಕಾದ ದ್ರವ್ಯಗಳನ್ನು ಬಾಹುಬಲಿ ಬೆಟ್ಟದಲ್ಲಿಯೇ ಸಿದ್ಧಪಡಿಸಲಾಯಿತು.
5 ಸಾವಿರ ಜನ ಕುಳಿತು ಅಭಿಷೇಕ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು. ಮಹಾಮಜ್ಜನಕ್ಕೂ ಮುನ್ನಾ ಭಗವಾನ್ ಬಾಹುಬಲಿಗೆ ಪೂಜೆ ಹಾಗೂ ಆಗ್ರೋದಕ ಮೆರವಣಿಗೆ ನಡೆಯಿತು. ಪ್ರತಿ ಅಭಿಷೇಕದ ನಡುವೆ ಭಕ್ತಿಗೀತೆಗಳು ಕೂಡಾ ಸರಾಗವಾಗಿ ನಡೆಯುತ್ತಿತ್ತು. ಪ್ರತಿ ಹನ್ನೆರಡು ವರುಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿದ್ದರು.
ಬಾಹುಬಲಿ ಮಹಾಮಸ್ತಕಾಭಿಷೇಕ:ಧರ್ಮಸ್ಥಳಕ್ಕೆ ಹರಿದುಬರುತ್ತಿದೆ ಭಕ್ತರ ದಂಡು
ಇನ್ನೆರೆಡು ದಿನಗಳ ಕಾಲ ಮಹಾಮಸ್ತಕಾಭಿಷೇಕ ನಡೆಯಲಿದ್ದು, ದೇಶದ ಮೂಲೆ ಮೂಲೆಗಳಿಂದ ಭಕ್ತರು ವಿರಾಟ್ ವಿರಾಗಿ ಬಾಹುಬಲಿಗೆ ಅಭಿಷೇಕ ನಡೆಸಲು ಕಾತರರಾಗಿದ್ದಾರೆ. ಈ ಮೂಲಕ ಸರ್ವ ಪರಿತ್ಯಾಗಿ ಬಾಹುಬಲಿಯ ಕೃಪೆಗೆ ಪಾತ್ರರಾಗಲು ಭಕ್ತರು ಉತ್ಸುಕರಾಗಿದ್ದಾರೆ.