ಬಪ್ಪನಾಡು ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಬಾಹುಬಲಿಯ 'ದೇವಸೇನಾ' ಅನುಷ್ಕಾ
ಬಾಹುಬಲಿ ಚಿತ್ರದ ನಾಯಕಿ, ಕರ್ನಾಟಕದ ಪುತ್ತೂರು ಮೂಲದ ಅನುಷ್ಕಾ ಶೆಟ್ಟಿ ಶನಿವಾರ ಬಪ್ಪನಾಡು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ದರು. ಅವರ ಜತೆಗೆ ತಾಯಿ ಪ್ರಫುಲ್ ಶೆಟ್ಟಿ ಹಾಗೂ ಮುತ್ತಪ್ಪ ರೈ ಇದ್ದರು
ಮಂಗಳೂರು, ಮೇ 20: ತೆಲುಗಿನ ಸಿನಿಮಾ ಬಾಹುಬಲಿ ಎರಡನೇ ಭಾಗದ ಯಶಸ್ಸಿನಲ್ಲಿ ಸಂಭ್ರಮಿಸುತ್ತಿರುವ ಚಿತ್ರದ ನಾಯಕಿ ಅನುಷ್ಕಾ ಶೆಟ್ಟಿ ಶನಿವಾರ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ದರು. ತುಂಬ ಸರಳವಾದ ದಿರಿಸು ತೊಟ್ಟಿದ್ದ ಆಕೆಯ ಜತೆಗೆ ತಾಯಿ ಪ್ರಫುಲಾ ಶೆಟ್ಟಿ, ಜಯ ಕರ್ನಾಟಕ ಸಂಘಟನೆಯ ಮುತ್ತಪ್ಪ ರೈ ಇದ್ದರು.
ದೇವರಿಗೆ ಪೂಜೆ ಸಲ್ಲಿಸಿ, ಎಲ್ಲ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ ಬಳಿಕ ದೇವಾಲಯ ಅಡಳಿತ ಮಂಡಳಿಯಿಂದ ಅನುಷ್ಕಾ ಶೆಟ್ಟಿ ಅವರಿಗೆ ಸನ್ಮಾನ ಮಾಡಲಾಯಿತು. ಮೊದಲಿಗೆ ಮಾಧ್ಯಮಗಳ ಜತೆಗೆ ಮಾತನಾಡಲು ನಿರಾಕರಿಸಿದ ಅನುಷ್ಕಾ ಶೆಟ್ಟಿ, ಸಿನಿಮಾದ ಯಶಸ್ಸಿನಿಂದ ತುಂಬ ಖುಷಿಯಾಗಿದೆ. ಆದ್ದರಿಂದಲೇ ವಿವಿಧ ದೇವಾಲಯಗಳಿಗೆ ಭಕ್ತಿ ಸಮರ್ಪಿಸುವುದಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.[ಬಾಹುಬಲಿ ಚಿತ್ರಕ್ಕೆ 200 ಕೋಟಿ ರು. ಇನ್ಶುರೆನ್ಸ್]
ಮೇ 19ರಂದು ಅನುಷ್ಕಾ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಲ್ಲಿ ಪೂಜೆ ಸಲ್ಲಿಸಿದ ನಂತರ ಹೈದರಾಬಾದ್ ಗೆ ತೆರಳಿದರು. ಬಾಹುಬಲಿ ಸಿನಿಮಾದ ಎರಡನೇ ಭಾಗವು ಬಿಡುಗಡೆಯಾದ ಎಲ್ಲ ಕಡೆ ಅದ್ಭುತವಾದ ಪ್ರದರ್ಶನವನ್ನು ಕಾಣುತ್ತಿದೆ. ಈಗಾಗಲೇ ನೂರಾರು ಕೋಟಿ ರುಪಾಯಿ ಆದಾಯ ಮಾಡುವ ಮೂಲಕ ದಾಖಲೆ ಸ್ಥಾಪಿಸಿದೆ.