ಪುತ್ತೂರಿನಲ್ಲಿ ಕಾರಿನಲ್ಲೇ ಮಗುವನ್ನು ಮರೆತು ಶಾಪಿಂಗ್ ಗೆ ಹೋದ ಪೋಷಕರು, ಆಮೇಲೇನಾಯ್ತು?
ಮಂಗಳೂರು, ಮೇ 11:ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮೇನಿಯಾ, ಆತುರದ ಜೀವನ ಶೈಲಿಯಿಂದಾಗಿ ಎಲ್ಲಾ ಭಾವನಾತ್ಮಕ ಸಂಬಂಧಗಳು ಮರೆಯಾಗುತ್ತಿವೆ. ಪೋಷಕರು ಆತುರದಲ್ಲಿ ತಮ್ಮ ಮಕ್ಕಳನ್ನು ಮರೆತು ಹೋದ ಹಲವಾರು ಪ್ರಸಂಗಗಳು ಬೆಳಕಿಗೆ ಬರುತ್ತಲಿವೆ.
ಅದರಲ್ಲೂ ಮಕ್ಕಳನ್ನು ಕಾರಿನಲ್ಲೇ ಬಿಟ್ಟು ನಂತರ ಅವರು ಅಪಾಯಕ್ಕೆ ಸಿಲುಕಿ, ಹೇಗೋ ಪಾರಾದ ಹಲವಾರು ಘಟನೆಗಳೂ ನಮ್ಮ ಕಣ್ಣ ಮುಂದಿವೆ. ಇದೀಗ ಇಂತಹುದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ. ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ.
ಪೋಷಕರು ಕಾರಿನಲ್ಲೇ ಮಗು ಮರೆತು ಹೋಗಿ, ಆ ನಂತರ ಕಾರಿನ ಗ್ಲಾಸ್ ಒಡೆದು ಮಗುವಿನ ರಕ್ಷಣೆ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಬಳಿಯ ಸಂಜೀವ ಶೆಟ್ಟಿ ಜವಳಿ ಅಂಗಡಿಗೆ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಪೋಷಕರು ಮಗು ಮತ್ತು ಕೀಯನ್ನು ಕಾರಿನಲ್ಲೇ ಬಿಟ್ಟು ಜವಳಿ ಅಂಗಡಿಗೆ ಹೋಗಿದ್ದರು.
ಕೀ ಕಾರಿನೊಳಗೆ ಉಳಿದಿದೆ ಎಂದು ತಿಳಿಯುವ ವೇಳೆಗೆ ಕಾರು ಆಟೋ ಲಾಕ್ ಆಗಿ ಮಗು ಕಾರಿನಲ್ಲಿ ಬಂಧಿಯಾಗಿತ್ತು. ಇದೇ ಸಂದರ್ಭದಲ್ಲಿ ಮಗು ಕೂಡ ಕಾರಿನ ಕೀಯನ್ನು ಹಿಡಿದುಕೊಂಡು ಆಟ ಆಡುತ್ತಿತ್ತು. ವಿಷಯ ತಿಳಿದ ಜನರ ಗುಂಪು ಕಾರಿನ ಸುತ್ತು ಆವರಿಸಿದಾಗ ಮಗು ಅಳತೊಡಗಿತ್ತು. ಗಾಬರಿಗೊಂಡ ಪೋಷಕರು ಕಾರಿನ ಲಾಕ್ ತೆಗೆಯಲು ಪೇಚಾಡುತ್ತಿದ್ದರು.
ಇದನ್ನು ಗಮನಿಸಿದ ಯುವಕರಾದ ಸಿರಾಜ್ ಎಕೆ ಮತ್ತು ಜಾಸ್ಲಿ ಡಿಸೋಜಾ ಎಂಬುವವರು ಕಾರಿನ ಹಿಂಬದಿಯ ಎಡಬದಿಯಲ್ಲಿರುವ ಕನ್ನಡಿ ಒಡೆದು ಮಗುವನ್ನು ರಕ್ಷಿಸಿದ್ದಾರೆ.