ಅಂಗನವಾಡಿ ಮಕ್ಕಳಿಗಾಗಿ ಬಿಸ್ಕೆಟ್ ಭಾಗ್ಯ ಯೋಜನೆ
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಯು.ಟಿ.ಖಾದರ್, ಆಯುರ್ವೇದಿಕ್ ಗಿಡಮೂಲಿಕೆಗಳಿಂದ ತಯಾರಿಸಿದ ಆಯುಷ್ ಪುಷ್ಟಿ ಬಿಸ್ಕತ್ ಗಳನ್ನು ಅಂಗನವಾಡಿ ಮಕ್ಕಳಿಗೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪೌಷ್ಟಿಕಾಂಶ ಕೊರತೆ ಅನುಭವಿಸುತ್ತಿರುವ ಮಕ್ಕಳಿರುವ ಒಂದು ತಾಲೂಕಿನಲ್ಲಿ ಆರಂಭಿಸಿ, ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಆಯುಷ್ ಪುಷ್ಟಿ ಬಿಸ್ಕತ್ತು ಉತ್ಪಾದನಾ ಕೇಂದ್ರವನ್ನು ಆಯುಷ್ ಇಲಾಖೆ ವತಿಯಿಂದ ನಡೆಸಲಾಗುವುದು. ಒಂದು ತಾಲೂಕಿಗೆ ಬೇಕಾಗುವಷ್ಟು ಬಿಸ್ಕತ್ತು ಈಗಾಗಲೇ ಸಿದ್ಧಪಡಿಸಲಾಗಿದೆ. ಮಕ್ಕಳ ಆರೋಗ್ಯವನ್ನು ಸುಸ್ಥಿರಗೊಳಿಸುವ ಏಕೈಕ ಉದ್ದೇಶದಿಂದ ಈ ಬಿಸ್ಕತ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಶೀಘ್ರವೇ ಮೊಬೈಲ್ : ಕರ್ನಾಟಕದ 35 ಸಾವಿರ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಉಚಿತವಾಗಿ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲ ಆಶಾ ಕಾರ್ಯಕರ್ತೆಯರಿಗೆ ಏಕ ಕಾಲದಲ್ಲಿ ಮೊಬೈಲ್ ತಲುಪಿಸಲಾಗುವುದು ಎಂದು ಹೇಳಿದರು.
ಏಕೀಕೃತ ಮೆಡಿಸಿನ್ ಕೇಂದ್ರ : ಪ್ರತಿ ಜಿಲ್ಲೆಯಲ್ಲಿಯೂ ಏಕೀಕೃತ ಮೆಡಿಸಿನ್ ಕೇಂದ್ರ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಖಾದರ್ ಹೇಳಿದ್ದಾರೆ. ಒಂದೇ ಕಟ್ಟಡದಲ್ಲಿ ಆಯುರ್ವೇದ, ಹೋಮಿಯೋಪಥಿ, ಯುನಾನಿ, ನ್ಯಾಚುರೋಪತಿ, ಅಲೋಪತಿ ವೈದ್ಯರಿರುತ್ತಾರೆ. ಈ ಯೋಜನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಶೀಘ್ರವೇ ಆರಂಭಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರುಗಳಿಗೆ ಮಾಸಿಕ ಮೊತ್ತವನ್ನು ಮೆಡಿಕಲ್ ಕಾಲೇಜು ಉಪನ್ಯಾಸಕ ಮೊತ್ತಕ್ಕೆ ಸಮಾನಾಗಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಲ್ಲದೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸೂಕ್ತ ಸಂಭಾವನೆ ನೀಡಲಾಗುವುದು ಎಂದು ಖಾದರ್ ಭರವಸೆ ನೀಡಿದರು