ಕಷ್ಟ ಕಾಲದಲ್ಲಿ ನೆರವಾದವರಿಗೆ ಗುರುತಿನ ಚೀಟಿ : ಫರ್ನಾಂಡಿಸ್
ಮಂಗಳೂರು, ಜನವರಿ 23 : ಅಪಘಾತ, ಹೆರಿಗೆ ಸೇರಿದಂತೆ ತುರ್ತು ಸಮಯದಲ್ಲಿ ಸಹಾಯ ಮಾಡಿ ಜನರ ಪ್ರಾಣ ಕಾಪಾಡಿದ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸೇವೆಯನ್ನು ಪರಿಗಣಿಸಿ ಅವರಿಗೆ ವಿಶೇಷ ಗುರುತು ಪತ್ರ ನೀಡಲು ಚಿಂತಿಸಲಾಗಿದೆ.
ಈ ಕುರಿತು ಸ್ವತಃ ತಾವೇ ಆಸಕ್ತಿ ತೆಗೆದುಕೊಂಡು ಕಾರ್ಮಿಕ ಸಚಿವಾಲಯದಲ್ಲಿ ಮಾತುಕತೆ ನಡೆಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಭರವಸೆ ನೀಡಿದ್ದಾರೆ.
ಇದು ಮಾನವೀಯ ಗುಣವುಳ್ಳ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಖುಷಿ ನೀಡಿದ್ದಲ್ಲದೇ ಇನ್ನಷ್ಟು ಸಹಾಯ ಮಾಡುವಂತೆ ಪ್ರೇರೆಪಿಸಲಿದೆ ಎಂದರು.
ಕರಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿ ಅಪಘಾತ ನಡೆದಾಗ ಸ್ಥಳಕ್ಕೆ ಭೇಟಿ ನೀಡಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಅವರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಇವರ ಸಮಯ ಪ್ರಜ್ಞೆಯ ಕೆಲಸದಿಂದಾಗಿ ಇಂದಿಗೂ ಸಾಕಷ್ಟು ಪ್ರಾಣಗಳು ಉಸಿರಾಡುತ್ತಿವೆ.
ಆದರೆ, ಇವನ್ನೆಲ್ಲಾ ಗುರುತಿಸಿದವರು ಬಹಳ ವಿರಳ. ಇದು ಯಾರಿಗೂ ಕಾಣದ ಸಮಾಜ ಸೇವೆ. ಹೀಗಾಗಿ ಅವರು ಮಾಡುವ ಸೇವಾ ಮನೋಭಾವವನ್ನು ಗಣನೆಗೆ ತೆಗೆದುಕೊಂಡು ಅಂತಹವರಿಗೆ ವಿಶೇಷ ಗುರುತು ಪತ್ರ ನೀಡುವಂತೆ ಕಾರ್ಮಿಕ ಸಚಿವಾಲಕ್ಕೆ ಮನವಿ ಮಾಡಲಾಗುವುದು ಎಂದು ಆಸ್ಕರ್ ಹೇಳಿಕೆ ತಿಳಿಸಿದ್ದಾರೆ
ಕರಾವಳಿಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಲ್ಲದೇ ಇತರರು ಸಹ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಗುರಿತಿನ ಚೀಟಿ ನೀಡಬೇಕೆಂಬ ಕೂಗುಗಳು ಸಹ ಕೇಳಿ ಬಂದಿವೆ.