ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಕೊಲೆ; ಹರಿದಾಡುತ್ತಿದೆ ಆಡಿಯೋ ಮೆಸೇಜ್
ಮಂಗಳೂರು, ಅಕ್ಟೋಬರ್ 22: ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಮೆಸೇಜ್ ಒಂದು ಹರಿದಾಡುತ್ತಿದ್ದು, "ಸುರೇಂದ್ರ ಬಂಟ್ವಾಳ್ ಹತ್ಯೆಯನ್ನು ನಾನೇ ಮಾಡಿದ್ದು" ಎಂದು ವ್ಯಕ್ತಿಯೊಬ್ಬ ಅದರಲ್ಲಿ ಹೇಳಿಕೊಂಡಿದ್ದಾನೆ.
ವಾಟ್ಸ್ ಆಪ್ ನಲ್ಲಿ ಈ ಆಡಿಯೋ ಮೆಸೇಜ್ ಹರಿದಾಡುತ್ತಿದ್ದು, ಇದನ್ನು ಕಳುಹಿಸಿದ್ದು ಸುರೇಂದ್ರ ಜೊತೆಗಿದ್ದ ಸತೀಶ್ ಕುಲಾಲ್ ಎಂದು ಗುರುತಿಸಲಾಗಿದೆ. ಮೆಸೇಜ್ ನಲ್ಲಿ, "ಇದು ಉಡುಪಿಯ ಹಿರಿಯಡ್ಕದಲ್ಲಿ ನಡೆದ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ" ಎಂದು ತಿಳಿಸಿದ್ದಾನೆ.
ಬಂಟ್ವಾಳದ ಫ್ಲಾಟ್ ನಲ್ಲಿ ತುಳು ಸಿನಿಮಾ ನಟ ಸುರೇಂದ್ರ ಬರ್ಬರ ಕೊಲೆ
''ನಾನು ಸುರೇಂದ್ರನೊಂದಿಗೆ 22 ವರ್ಷಗಳಿಂದ ಇದ್ದೆ. ಆತನ ಅವ್ಯವಹಾರಗಳೆಲ್ಲಾ ನನಗೆ ಗೊತ್ತಿದೆ. ಸುರೇಂದ್ರ ಕಿಶನ್ ಹೆಗ್ಡೆ ಕೊಲೆ ಮಾಡಲು ಹಣ ಕೊಟ್ಟಿದ್ದ. ಸೆ.24ಕ್ಕೆ ಕಿಶನ್ ಕೊಲೆಯಾಯಿತು. ನಾನು ಕೊಲೆ ಮಾಡಿಸಬೇಡ, ತಪ್ಪು ಮಾಡಬೇಡ ಎಂದು ಬುದ್ಧಿ ಹೇಳಿದ್ದೆ. ಆಗ ನನ್ನನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸುರೇಂದ್ರನ ಹತ್ಯೆ ಉಡುಪಿಯ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ'' ಎಂದು ಸಂದೇಶದಲ್ಲಿ ಹೇಳಿಕೊಂಡಿದ್ದಾನೆ. ಸದ್ಯಕ್ಕೆ ಕಾರವಾರದಲ್ಲಿದ್ದು, ಇನ್ನೆರಡು ದಿನಗಳಲ್ಲಿ ಪೊಲೀಸರ ಮುಂದೆ ಶರಣಾಗುವುದಾಗಿಯೂ ತಿಳಿಸಿದ್ದಾನೆ.
ನಟ ಸುರೇಂದ್ರ ಬಂಟ್ವಾಳ್ ಅ.21ರಂದು ಬಂಟ್ವಾಳದ ಬಿ.ಸಿ.ರೋಡ್ ನಲ್ಲಿನ ಅವರ ಫ್ಲಾಟ್ ನಲ್ಲಿ ಕೊಲೆಯಾಗಿದ್ದರು. ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತಗೊಂಡಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಹಂತರಕ ಪತ್ತೆಗೆ ಮೂರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿರುವುದಾಗಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ತಿಳಿಸಿದ್ದರು. ಈ ನಡುವೆ ಈ ಆಡಿಯೋ ಮೆಸೇಜ್ ಹರಿದಾಡುತ್ತಿದ್ದು, ಈ ಕುರಿತೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.