ಆಶಾ ಕಾರ್ಯಕರ್ತೆ ಮೇಲೆ ಮಂತ್ರವಾದಿಯಿಂದ ಹಲ್ಲೆ ಯತ್ನ
ಮಂಗಳೂರು, ಮೇ 11: ಮನೆಯ ಮುಂದೆ ಜನ ಸೇರಿರುವುದನ್ನು ಪ್ರಶ್ನಿಸಿದ್ದಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಮಂತ್ರವಾದಿಯೊಬ್ಬ ಪೊರಕೆಯಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಿಪಾಡಿಯಲ್ಲಿ ನಡೆದಿದೆ.
ಪತಿ ವಿಶ್ವನಾಥ್ ಹಾಗೂ ಆತನ ಪತ್ನಿ ಎಂಬುವವರೇ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳು. ವಿಶ್ವನಾಥ್ ತನ್ನ ಮನೆಯಲ್ಲಿ ಮಂತ್ರವಾದಿ ಕಾರ್ಯವನ್ನು ಮಾಡುತ್ತಿದ್ದ. ಹೀಗಾಗಿ ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಈತನ ಮನೆಗೆ ಬರುತ್ತಿದ್ದರಿಂದ ಜನಸಂದಣಿ ಉಂಟಾಗುತ್ತಿತ್ತು.
ಆದರೆ ವಿಶ್ವನಾಥ್ ಮನೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಯಲ್ಲಿದ್ದ ಪೊರಕೆಯಿಂದ ಹಲ್ಲೆಗೆ ಯತ್ನಿಸಿದ್ದಾರೆ.
ಕೂಡಲೇ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರು, ಕುಕ್ಕಿಪಾಡಿ ಗ್ರಾಮ ಪಂಚಾಯತಿ ಸದಸ್ಯರಾದ ಯೋಗೀಶ್ ಆಚಾರ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮ ಪಂಚಾಯತಿ ಸದಸ್ಯರ ಮೇಲೂ ವಿಶ್ವನಾಥ್ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.