ಮೂಡಬಿದ್ರೆಯಲ್ಲಿ ದುಷ್ಕರ್ಮಿಗಳು ನಡೆಸಿದ ದಾಳಿ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು, ಸೆಪ್ಟೆಂಬರ್. 25: ಸೋಮವಾರ (ಸೆ.25) ಮುಂಜಾನೆ ಮೂಡಬಿದ್ರೆಯ ಗಂಟಾಲ್ ಕಟ್ಟೆಯಲ್ಲಿ ಪ್ರಶಾಂತ ಪೂಜಾರಿ ಹತ್ಯೆ ಪ್ರಕರಣ ಆರೋಪಿ ಇಮ್ತಿಯಾಜ್ ಮೇಲೆ ನಡೆದ ದಾಳಿಯ ದೃಶ್ಯ ಪಕ್ಕದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮುಂಜಾನೆ 6 ಗಂಟೆಯ ಸುಮಾರಿಗೆ ಕಾರ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಇಮ್ತಿಯಾಜ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಅವರನ್ನು 2 ವರ್ಷಗಳ ಹಿಂದೆ ಮೂಡಬಿದ್ರೆಯಲ್ಲಿ ಮುಂಜಾನೆ 6 ಗಂಟೆಯ ಸುಮಾರಿಗೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಹತ್ಯೆ ಮಾಡಿತ್ತು.
ಬೆಳ್ಳಂಬೆಳಗ್ಗೆ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣ ಆರೋಪಿ ಮೇಲೆ ದಾಳಿ
ಈ ಪ್ರಕರಣದ 14 ಮಂದಿ ಆರೋಪಿಗಳ ಪೈಕಿ ಇಮ್ತಿಯಾಜ್ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಇಮ್ತಿಯಾಜ್ ನ ಸಹೋದರ ಬದ್ರುದ್ದಿನ್ ಹೆಸರು ಕೂಡ ಈ ಕೇಳಿ ಬಂದಿತ್ತು. ಕೆಲದಿನಗಳ ಕಾಲ ಜೈಲಿನಲ್ಲಿದ್ದ ಇಮ್ತಿಯಾಜ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಮೂಡಬಿದ್ರೆ ಸಮೀಪದ ಗಂಟಾಲ್ ಕಟ್ಟೆ ಎಂಬಲ್ಲಿ ಇಮ್ತಿಯಾಜ್ ಸಣ್ಣ ಹೊಟೇಲ್ ನಡೆಸಲು ಆರಂಭಿಸಿದ್ದ. ನಿನ್ನೆ ಮುಂಜಾನೆ ಇನ್ನೋವಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಹೊಟೇಲ್ ಗೆ ಚಾ ಕುಡಿಯುವ ನೆಪದಲ್ಲಿ ತೆರಳಿದ್ದಾರೆ. ಇಮ್ತಿಯಾಜ್ ಕಂಡೊಡನೆ ಅವರ ಮೇಲೆ 5 ಜನರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.
ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು:ಹಿಂದೂ ಸಂಘಟನೆ ಮುಖಂಡನ ಮೇಲೆ ದಾಳಿ
ಈ ನಡುವೆ ಇಮ್ತಿಯಾಜ್ ದುಷ್ಕರ್ಮಿಗಳ ದಾಳಿಯಿಂದ ತಪ್ಪಿಕೊಳ್ಳುವಲ್ಲಿ ಸಫಲರಾಗಿದ್ದರು. ದಾಳಿ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಕಾರು ಹತ್ತಿ ಪರಾರಿಯಾಗಿದ್ದಾರೆ. ಈ ಘಟನೆ ಪಕ್ಕದಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳ ಆಧಾರದ ಮೇಲೆ ತನಿಖೆ ಅರಂಭಿಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಸಂಜೆ ಕೈಕಂಬ ಎಂಬಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಹರೀಶ್ ಶೆಟ್ಟಿ ಎಂಬುವವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಹರೀಶ್ ಶೆಟ್ಟಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಡಬಿದ್ರೆಯಲ್ಲಿ ಇಮ್ತಿಯಾಜ್ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಹರೀಶ್ ಶೆಟ್ಟಿ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಅನುಮಾನಿಸಲಾಗುತ್ತಿದೆ.
ಹಿಂದೂಗಳೇ, ಕಾನೂನು ಕೈಗೆತ್ತಿಕೊಳ್ಳಬೇಡಿ: ಉಮಾನಾಥ ಕೋಟ್ಯಾನ್ ಕರೆ
ಈ ಸರಣಿ ದಾಳಿ ಪ್ರಕರಣಗಳ ತನಿಖೆಗೆ ಹಾಗು ದುಷ್ಕರ್ಮಿಗಳ ಪತ್ತೆಗೆ ಪೊಲೀಸರ 4 ತಂಡ ರಚಿಸಲಾಗಿದೆ. ಸರಣಿ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಮಂಗಳೂರು, ಮೂಡಬಿದ್ರೆ ಹಾಗೂ ಸುತ್ತಮುತ್ತಲ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬಂದೋಬಸ್ತ್ ಹಾಕಿದ್ದಾರೆ.