ಮಂಗಳೂರು: ಪ್ರಚಾರ ಪಡೆಯಲು ದಾಳಿಯ ಕತೆ ಕಟ್ಟಿದ ಹಿಂಜಾವೇ ಮುಖಂಡ
ಮಂಗಳೂರು, ಜನವರಿ 11: ತನ್ನ ಮೇಲೆ ತಲವಾರು ದಾಳಿಗೆ ಯತ್ನ ನಡೆಯಿತು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಸುರತ್ಕಲ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದ ಸತ್ಯಾಸತ್ಯತೆ ಈಗ ಬಟಾಬಯಲಾಗಿದೆ.
ಹಿಂದೂ ಜಾಗರಣ ವೇದಿಕೆ ಸುರತ್ಕಲ್ ಘಟಕದ ಸಹ ಸಂಚಾಲಕ ಭರತ್ ರಾಜ್ ಅಗರಮೇಲು ಜನವರಿ 8 ರಂದು ರಾತ್ರಿ ಸುರತ್ಕಲ್ ಪೊಲೀಸ್ ಠಾಣೆಗೆ ತೆರಳಿ ನೀಡಿದ್ದ ದೂರು ಕಟ್ಟುಕತೆ ಎಂಬುದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಯಲಾಗಿದೆ.
ಘಟನೆಯ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಕುಮಾರ್ ಖುದ್ದಾಗಿ ತನಿಖೆ ನಡೆಸಿದ್ದರು . ದಾಳಿಗೆ ಯತ್ನ ನಡೆದಿತ್ತು ಎಂದು ಹೇಳಲಾದ ಸ್ಥಳಕ್ಕೆ ಭರತ್ ರಾಜ್ ಅಗರಮೇಲು ಅವರನ್ನು ಕರೆದೊಯ್ದು ವಿಚಾರಣೆ ನಡೆಸಿದ ಬಳಿಕ, ಕಟ್ಟು ಕತೆಯೊಂದನ್ನು ಹೆಣೆದು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಭರತ್ ಯತ್ನಿಸಿದ್ದ ಎಂಬುದು ಖಚಿತವಾಗಿದೆ.
ಕತೆಯ ಸೂತ್ರದಾರ
"ಜನವರಿ 8 ರಂದು ಸೋಮವಾರ ರಾತ್ರಿ 8:30 ರ ಸುಮಾರಿಗೆ ಅಗರಮೇಲು ಎಂಬಲ್ಲಿ ಮೋಟರ್ ಬೈಕ್ನಲ್ಲಿ ತೆರಳುತ್ತಿದ್ದಾಗ ಪೊದೆಯಲ್ಲಿ ಅವಿತು ಕುಳಿತಿದ್ದ ನಾಲ್ವರು ದುಷ್ಕರ್ಮಿಗಳು ತಲವಾರುಗಳೊಂದಿಗೆ ನನ್ನನ್ನು ಕೊಲ್ಲಲು ಯತ್ನಿಸಿದರು. ಆಗ ಬೈಕ್ ಬಿಟ್ಟು ಓಡಿ ಹೋಗಿ ಸಮೀಪದ ಮನೆಯೊಂದಕ್ಕೆ ನುಗ್ಗಿ ನಾನು ತಪ್ಪಿಸಿಕೊಂಡೆ. ಆರೋಪಿಗಳು ಅಲ್ಲಿಂದ ಹೊರಟುಹೋದ ಬಳಿಕ ವಾಪಸು ಬಂದಿದ್ದೇನೆ," ಎಂದು ಭರತ್ ರಾಜ್ ಅಗರಮೇಲು ದೂರಿನಲ್ಲಿ ಉಲ್ಲೇಖಿಸಿದ್ದ.
ಇದಾದ ಬಳಿಕ ಜನವರಿ 8 ರಂದು ರಾತ್ರಿ ಭರತ್ ರಾಜ್ ಮೇಲೆ ನಾಲ್ವರು ದಾಳಿಗೆ ಯತ್ನಿಸಿದ್ದಾರೆ ಎಂಬ ಸುದ್ದಿ ವಾಟ್ಸ್ ಆ್ಯಪ್ ಮೂಲಕ ಹರಿದಾಡಲು ಆರಂಭಿಸಿತ್ತು. ಈ ಮಾಹಿತಿ ಸುದ್ದಿ ಮಾಧ್ಯಮಗಳಲ್ಲಿ, ಪತ್ರಿಕೆಗಳನ್ನೂ ಪ್ರಸಾರವಾಗಿತ್ತು.
ಬಳಿಕ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಕುಮಾರ್, ಡಿಸಿಪಿ ಹನುಮಂತರಾಯ ಅವರೊಂದಿಗೆ ತೆರಳಿದ್ದರು. ಮಧ್ಯಮಗಳಲ್ಲಿ ಮಾಹಿತಿ ನೀಡುತ್ತಿದ್ದ ಭರತ್ ರಾಜ್ನನ್ನು ಸ್ಥಳಕ್ಕೆ ಕರೆದೊಯ್ದ ಕಮಿಷನರ್ ಸ್ಥಳದಲ್ಲೇ ವಿಚಾರಣೆ ನಡೆಸಿದ್ದಾರೆ. ಆಗ ಭರತ್ ದೂರಿನಲ್ಲಿ ಹೇಳಿರುವ ವಿಚಾರಕ್ಕೂ ವಾಸ್ತವಕ್ಕೂ ತಾಳೆ ಬರುತ್ತಿರಲಿಲ್ಲ ಎಂದು ಗೊತ್ತಾಗಿದೆ. ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ ನಾಲ್ವರಿಂದ ದಾಳಿಗೆ ಯತ್ನ ನಡೆದಿತ್ತು ಎಂದು ಭರತ್ ಹೇಳಿದ್ದ. ಆದರೆ ಪೊಲಿಸರಿಗೆ ನೀಡಿದ ದೂರಿನಲ್ಲಿ ಮೂರು ಮಂದಿ ಎಂದು ದಾಖಲಿಸಿದ್ದ. ಹೀಗೆ ಆತನ ಹೇಳಿಕೆಗಳಲ್ಲೇ ವಿರೋಧಾಭಾಸಗಳು ಮನೆ ಮಾಡಿದ್ದವು.
ದೂರಿನಲ್ಲಿ ಮೂವರ ಬಳಿ ತಲವಾರಿತ್ತು. ಅವರಲ್ಲಿ ಒಬ್ಬ ಬೂದು ಬಣ್ಣದ ಟಿ-ಷರ್ಟ್ ಮತ್ತು ಪ್ಯಾಂಟ್ ಹಾಗೂ ಇನ್ನೊಬ್ಬ ವ್ಯಕ್ತಿ ಷರ್ಟ್ ಹಾಗೂ ಪ್ಯಾಂಟ್ ಧರಿಸಿದ್ದ ಕುರಿತು ಭರತ್ ಮಾಹಿತಿ ನೀಡಿದ್ದ. ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದಾಗ ಒಬ್ಬನ ಬಳಿ ತಲವಾರು ನೋಡಿರುವುದಾಗಿ ಹೇಳಿದ. ಬೂದು ಬಣ್ಣದ ಟಿ-ಷರ್ಟ್ ಮತ್ತು ಪ್ಯಾಂಟ್ ಧರಿಸಿದ ಒಬ್ಬನನ್ನು ಸ್ಪಷ್ಟವಾಗಿ ನೋಡಿರುವುದಾಗಿ ತಿಳಿಸಿದ. ಆದರೆ, ಘಟನೆ ನಡೆದಿದೆ ಎಂದು ಆತ ತೋರಿಸಿದ ಸ್ಥಳದಲ್ಲಿ ಸಂಪೂರ್ಣ ಕತ್ತಲು ಆವರಿಸಿತ್ತು. ಬಟ್ಟೆಯ ಬಣ್ಣ ಗುರುತಿಸುವುದಕ್ಕೆ ಸಾಧ್ಯವೇ ಇರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಮಿಷನರ್ ವಿಚಾರಣೆ ತೀವ್ರಗೊಳಿಸುತ್ತಿದ್ದಂತೆಯೇ ತಬ್ಬಿಬ್ಬಾದ ಭರತ್ ರಾಜ್ ಅಲ್ಲಿಂದ ಪಲಾಯನ ಮಾಡಿದ್ದಾನೆ. ಮತ್ತೊಮ್ಮೆ ಆತನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸುರತ್ಕಲ್ ಠಾಣೆ ಪೊಲೀಸರಿಗೆ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ ನಿರ್ದೇಶನ ನೀಡಿದ್ದಾರೆ.