ಈ ಬಾರಿಯಾದ್ರೂ 15 ಲಕ್ಷ ಜನರ ಖಾತೆಗೆ ಬೀಳುವಂತಾಗಲಿ: ಯು.ಟಿ.ಖಾದರ್ ವ್ಯಂಗ್ಯ
ಮಂಗಳೂರು, ಮೇ 25: ಪ್ರಧಾನಿ ಮೋದಿ ಅವರ ವಿರುದ್ಧ ಅತಿಯಾದ ನೆಗೆಟಿವ್ ಪ್ರಚಾರ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂಬ ಅಭಿಪ್ರಾಯ ಕಾಂಗ್ರೆಸ್ ಪಾಳೆಯದಲ್ಲೇ ವ್ಯಕ್ತವಾಗುತ್ತಿದೆ. ಮೋದಿ ಸರ್ಕಾರದ ಹುಳುಕುಗಳನ್ನು ಜನರ ಮುಂದಿಟ್ಟು, ವೋಟು ಕೇಳುವ ಬದಲು, ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡುವ ಮಟ್ಟಕ್ಕಿಳಿದಿದ್ದು ಕಾಂಗ್ರೆಸ್ ಸೋಲಿಗೆ ಮುಖ್ಯ ಕಾರಣ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಬಹಿರಂಗವಾಗಿಯೇ ಅಭಿಪ್ರಾಯಪಡುತ್ತಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತೆ 15 ಲಕ್ಷ ರೂಪಾಯಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟ
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಯು. ಟಿ ಖಾದರ್, ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ತಿಳಿಸಿದರು. ಸೋಲು ಶಾಶ್ವತ ಅಲ್ಲ, ಮತ್ತೆ ಜನರ ಸೇವೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹ್ಯಾಟ್ರಿಕ್ ಹೊಡೆದ ನಳಿನ್ ಕುಮಾರ್ ಕಟೀಲ್
ಮತ್ತೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿ ಅವರಿಗೆ ಸ್ವಾಗತ ಎಂದು ಹೇಳಿದ ಅವರು, ನಂತರ ಈ ಬಾರಿಯಾದ್ರೂ 15 ಲಕ್ಷ ರೂಪಾಯಿ ಜನರ ಖಾತೆಗೆ ಬೀಳುವಂತಾಗಲಿ ಎಂದು ವ್ಯಂಗ್ಯವಾಡಿದರು. ಬೆಲೆ ಏರಿಕೆ, ಡಾಲರ್ ರೇಟ್ ಕಡಿಮೆಯಾಗಿ ಆರ್ಥಿಕ ಪ್ರಗತಿ ಸಾಧಿಸಬೇಕು. ಕಳೆದ ಬಾರಿ ನೀಡಿದ ಆಶ್ವಾಸನೆ ಒಂದೂ ಈಡೇರಿಸಲು ಆಗಿಲ್ಲ, ಈ ಬಾರಿ ಆಶ್ವಾಸನೆಗಳನ್ನು ಈಡೇರಿಸಲಿ ಎಂದು ಹೇಳಿದರು. ಮತ್ತೆ ಪುಲ್ವಾಮ ಆಗುವುದು ಬೇಡ ಎಂದೂ ಹೇಳಿದರು,
ಕಾಂಗ್ರೆಸ್ ಸೋಲಿನ ವಿಮರ್ಶೆ ಮಾಡಲಿದೆ. ಇದೇ ಫಲಿತಾಂಶ ಮುಂದೆ ಇರುವುದಿಲ್ಲ. ಗೆದ್ದವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಬಿಜೆಪಿ ಕಳೆದ ಒಂದು ವರ್ಷದಿಂದ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇನ್ನೂ ಪ್ರಯತ್ನ ನಡೆಸುತ್ತಿದೆ. ಆದರೆ ಅದು ಯಶಸ್ವಿ ಆಗುವುದಿಲ್ಲ. 5 ವರ್ಷಗಳ ಕಾಲ ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ಎಚ್.ಡಿ. ಕುಮಾರಸ್ವಾಮಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ದಕ್ಷಿಣ ಕನ್ನಡ ಕ್ಷೇತ್ರ: ಇಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವೇನು?
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂಬ ಬಿ.ಸಿ. ಪಾಟೀಲ್ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿಯವರೇ ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಶಾಸಕ ಬಿ ಸಿ ಪಾಟೀಲ್ ಹೇಳಿಕೆ ಸರಿಯಾದುದಲ್ಲ ಎಂದು ಕಿಡಿಕಾರಿದರು. ರಾಹುಲ್ ಗಾಂಧಿ ಆದೇಶದಂತೆ ಮೈತ್ರಿ ಧರ್ಮ ಕಾಪಾಡುತ್ತೇವೆ ಎಂದರು.