ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಭವಿಷ್ಯ!
ಬೆಂಗಳೂರು, ಅಕ್ಟೋಬರ್ 06 : "2020ರಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಪತನಗೊಂಡು ಮತ್ತೆ ಚುನಾವಣೆ ನಡೆಯಲಿದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸಿದ್ದರಾಮಯ್ಯ, "ಯಡಿಯೂರಪ್ಪಗೆ ತನ್ನ ಸರ್ಕಾರದ ಸಾಧನೆ ಎಂದು ಹೇಳಿಕೊಳ್ಳಲು ಏನೂ ಇಲ್ಲ. ನೆರೆ ಪರಿಹಾರ ನೀಡುವುದಲ್ಲಿ ರಾಜ್ಯ, ಕೇಂದ್ರ ಸರ್ಕಾರ ವಿಫಲವಾಗಿದೆ" ಎಂದು ದೂರಿದರು.
ಪರಿಹಾರ ಸಾಕಾಗಲ್ಲ ಹೆಚ್ಚಿನ ಪರಿಹಾರ ಕೊಡಿ: ಸಿದ್ದರಾಮಯ್ಯ ಒತ್ತಾಯ
"ಮುಂದಿನ ವರ್ಷವೇ ಅಂದರೆ 2020ರಲ್ಲಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿದೆ" ಎಂದು ಸಿದ್ದರಾಮಯ್ಯ ಭವಿಷ್ಯ ಹೇಳಿದರು.
"ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸುಮಾರೂ ಎರಡೂವರೆ ಲಕ್ಷ ಮನೆಗಳು ಹಾನಿಗೊಳಗಾಗಿದೆ. ಸುಮಾರು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ" ಎಂದರು.
"ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರವಾಹದ ಬಗ್ಗೆ ಗಂಭೀರವಾದ ಚಿಂತನೆ ಮಾಡಿಲ್ಲ. ಕೇಂದ್ರ ಸರ್ಕಾರ ತಕ್ಷಣ 5 ಸಾವಿರ ಕೋಟಿ ರೂ. ನೆರವು ನೀಡಬೇಕು ಎಂದು ಒತ್ತಾಯಿಸಿದ್ದೆವು. ಆದರೆ, 1200 ಕೋಟಿ ರೂ. ಘೋಷಣೆ ಮಾಡಿದೆ" ಎಂದು ತಿಳಿಸಿದರು.
"ರಾಜ್ಯದ ಖಜಾನೆ ಖಾಲಿ ಆಗಿದೆ ಎಂದು ಯಡಿಯೂರಪ್ಪ ಪೆದ್ದು-ಪೆದ್ದು ಹೇಳಿಕೆ ನೀಡುತ್ತಾರೆ. ಖಜಾನೆ ಖಾಲಿ ಆಗಿದೆ ಎಂದರೆ ಏನರ್ಥ?. ಪ್ರತಿ ತಿಂಗಳು ತೆರಿಗೆ ಬರುತ್ತದೆ. ಸೂಕ್ತ ರೀತಿಯಲ್ಲಿ ತೆರಿಗೆ ಸಂಗ್ರಹಿಸಿದರೆ ಸಮಸ್ಯೆ ಬರುವುದಿಲ್ಲ" ಎಂದು ಸಲಹೆ ನೀಡಿದರು.