ವೈರಲ್ ಫೋಟೋ: ಕಾರು ನಿಲ್ಲಿಸಿದ ಜಾಗ ಬಿಟ್ಟು ಡಾಂಬರ್ ಹಾಕಿದ ಪುಣ್ಯಾತ್ಮರು
ಮಂಗಳೂರು, ಮಾರ್ಚ್ 18: ರಸ್ತೆಯಲ್ಲಿ ಕಾರ್ ಪಾರ್ಕಿಂಗ್ ಮಾಡಿದ ಜಾಗವನ್ನು ಬಿಟ್ಟು ಡಾಂಬರು ಮಾಡಿಕೊಂಡು ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
ವಿಟ್ಲ ಮುಖ್ಯ ಪೇಟೆಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಯಾವುದೋ ಪುಣ್ಯಾತ್ಮನೊಬ್ಬ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ನಿಲ್ಲಿಸಿದ್ದನು. ಕಾರನ್ನು ನಿಲ್ಲಿಸಿದ ಪ್ರದೇಶವನ್ನು ಮುಟ್ಟದೆ ಉಳಿದ ರಸ್ತೆಗೆ ಡಾಂಬರು ಹಾಕಲಾಗಿದೆ.
ಕಾರ್ಗೆ ಲಾಕ್ ಮಾಡಿರುವುದರಿಂದ ಅದನ್ನು ತೆರವುಗೊಳಿಸದೇ ಡಾಂಬರೀಕರಣಗೊಳಿಸಿದ ಘಟನೆ ನಡೆದಿದ್ದು, ಕುತೂಹಲದಿಂದ ವೀಕ್ಷಿಸಿ ಫೋಟೋ ಕ್ಲಿಕ್ಕಿಸಿಕೊಂಡ ಸಾರ್ವಜನಿಕರು, ಜಾಲತಾಣದಲ್ಲಿ ಅಪ್ಲೋಡ್ ಮಾಡಿ ವೈರಲ್ಗೊಳಿಸಿದ್ದಾರೆ.
ಮಾ.16ರಿಂದ ಡಾಂಬರೀಕರಣ ಆರಂಭಗೊಂಡಿದ್ದು, ವಿಟ್ಲ ಸರಕಾರಿ ಮಾದರಿ ಶಾಲೆಯ ಮುಂಭಾಗದಲ್ಲಿ ಹಾದು ಹೋಗುವ ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಕಾರು ನಿಲ್ಲಿಸಿ ಹೋದ ವ್ಯಕ್ತಿಗೂ ಇಲ್ಲಿ ಡಾಂಬರೀಕರಣ ನಡೆಯುತ್ತದೆ ಎಂಬ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಡಾಂಬರೀಕರಣ ಕಾಮಗಾರಿ ನಡೆಸುವವರು ವಾಹನ ಮಾಲೀಕರಿಗೆ ಈ ವಿಚಾರವನ್ನು ತಿಳಿಸದೇ ಕಾರಿನ ಚಕ್ರಗಳ ಹೊರ ಭಾಗದ ತನಕ ಡಾಂಬರು ಹಾಕಿದ್ದರು. ಇನ್ನೂ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಆ ಸ್ಥಳಕ್ಕೂ ಡಾಂಬರು ಹಾಕುವುದಾಗಿ ಸಂಬಂಧಿತ ಇಂಜಿನಿಯರ್ ತಿಳಿಸಿದ್ದಾರೆ.
ಹಾಳಾದ ರಸ್ತೆಯನ್ನು ಸಮ ಮಾಡಲು ರಸ್ತೆಗೆ ಡಾಂಬರು ಮಾಡುವಾಗ ಸೆರೆಹಿಡಿದಿರುವ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಸಾರ್ವಜನಿಕರ ನಗೆ ಮತ್ತು ಕೋಪ ಎರಡಕ್ಕೂ ತುತ್ತಾಗಿದೆ.
ವ್ಯಕ್ತಿಯೊಬ್ಬರು ಈ ಘಟನೆಯನ್ನು ವಿವರಿಸುತ್ತಾ, "ಯೂಟ್ಯೂಬ್ ಮತ್ತು ಇತರ ವಿಡಿಯೋಗಳಲ್ಲಿ ನಾವು ಸಾಮಾನ್ಯವಾಗಿ ನೋಡುವ ಇಂತಹ ದೃಶ್ಯ ಈಗ ನಮ್ಮ ಪಟ್ಟಣದಲ್ಲಿ ಸಂಭವಿಸಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.