ಟರ್ಪಾಲು ಹೊದಿಕೆಯಲ್ಲಿದ್ದ ಪೊಲೀಸ್ ಠಾಣೆ ಕಂಡು ದಂಗಾದ ಗೃಹ ಸಚಿವ!
ಮಂಗಳೂರು, ಜೂನ್ 27: ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಮೇಲ್ಛಾವಣಿಗೆ ಟರ್ಪಾಲು ಹೊದಿಕೆ ಹಾಕಿರುವುದನ್ನು ಕಂಡು ಗೃಹ ಸಚಿವ ಆರಗ ಜ್ಞಾನೇಂದ್ರ ದಂಗಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಗಮಿಸಿದ್ದ ಸಚಿವರು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೂ ಭೇಟಿ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು, ಆಶ್ಲೇಷ ಪೂಜೆ ಸಲ್ಲಿಸಿದರು. ಗೃಹಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯ ಕೃಷಿ ಸಂಶೋಧನಾ ಪ್ರತಿಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದಾರೆ. ಅದರ ಪರವಾಗಿ ಪೂಜೆ ಸಲ್ಲಿಸಿದರು.
ಈ ವೇಳೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಚಿವರು ಅಲ್ಲಿನ ಅವ್ಯವಸ್ಥೆ ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆ ಮಳೆಗೆ ಸೋರುತ್ತಿದ್ದು, ಅದರಿಂದ ರಕ್ಷಣೆ ಮಾಡಿಕೊಳ್ಳಲು ಟರ್ಪಾಲು ಹೊದಿಕೆ ಹಾಕಲಾಗಿತ್ತು. ಟರ್ಪಾಲ್ ಹೊದಿಕೆ ಕಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೊಸ ಠಾಣೆ ಕಟ್ಟಡ ಕಾಮಗಾರಿ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ನಾಚಿಕೆಯಾಗುತ್ತದೆ; ಸಚಿವರು
2017ರಲ್ಲಿಯೇ ಹೊಸ ಠಾಣೆ ಕಟ್ಟಡ ನಿರ್ಮಾಣಕ್ಕೆ 1.23 ಕೋಟಿ ರೂ. ಅನ್ನು ಸರ್ಕಾರ ಮೀಸಲಿಟ್ಟಿದೆ. ಟೆಂಡರ್ ಆಗಿದ್ದರೂ ಹಣ ಸಾಕಾಗಲ್ಲ ಎಂದು ಕಟ್ಟಡ ಕಾಮಗಾರಿ ವಿಳಂಬವಾಗಿತ್ತು. ಈ ಕುರಿತು ಇಂಜಿನಿಯರ್ಗೆ ಕರೆ ಮಾಡಿ ಮಾತನಾಡಿದ ಆರಗ ಈಗಿನ ಈ ಸ್ಥಿತಿ ನೋಡಿ ನಮಗೆ ನಾಚಿಕೆಯಾಗುತ್ತದೆ. ತಕ್ಷಣ ಬಂದು ಅಂದಾಜು ಪಟ್ಟಿ ತಯಾರಿಸಿ ಕೆಲಸ ಶುರು ಮಾಡಿ , ಹೊಸ ಠಾಣೆ ಕಿತ್ತು ಮಾಡ್ತಿರೋ, ಹೊಸ ಜಾಗದಲ್ಲಿ ಮಾಡ್ತಿರೋ ಬೇಗ ಮಾಡಿ ಎಂದು ತಾಕೀತು ಮಾಡಿದರು.
ಪ್ರತ್ಯೇಕ ರಾಜ್ಯದ ಹೇಳಿಕೆ ಸರಿಯಲ್ಲ
ಆ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಆರಗ ಜ್ಞಾನೇಂದ್ರ, "ಸಚಿವ ಉಮೇಶ್ ಕತ್ತಿಯವರ ಪ್ರತ್ಯೇಕ ರಾಜ್ಯದ ಹೇಳಿಕೆ ಒಪ್ಪಿಕೊಳ್ಳತ್ತಕ್ಕದಲ್ಲ. ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ಹೇಳಿಕೆಯನ್ನು ಯಾವ ಹಿನ್ನಲೆಯಲ್ಲಿ ನೀಡಿದ್ದಾರೆ ಎನ್ನುವುದು ನಮ್ಮ ಗಮನಕ್ಕೆ ಬಂದಿಲ್ಲ. ಅವರ ಹೇಳಿಕೆ ತಪ್ಪು. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ಸಚಿವರು ಸಾಕಷ್ಟು ಅನುದಾನಗಳನ್ನು ಆ ಭಾಗಕ್ಕೆ ಪಡೆದಿದ್ದಾರೆ. ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಕಾರಣಕ್ಕಾಗಿ ಉಮೇಶ್ ಕತ್ತಿಯವರು ತಮ್ಮ ಈ ಮಾತನ್ನು ಪುನರ್ ಪರಿಶೀಲನೆ ನಡೆಸಬೇಕೆಂದು" ಎಂದರು.
54 ಸಾವಿರ ಜನರಿಗೆ ಹೊಸದಾಗಿ ಪರೀಕ್ಷೆ
ಪಿಎಸೈ ಅಕ್ರಮ ಪ್ರಕರಣದ ಕುರಿತು ಮಾತನಾಡಿದ ಆರಗ ಜ್ಞಾನೇಂದ್ರ, "ಈ ಕುರಿತು ಪಾರದರ್ಶಕ ತನಿಖೆಯನ್ನು ಸರಕಾರ ಕೈಗೆತ್ತಿಕೊಂಡಿದೆ. ತನಿಖೆ ಆದಷ್ಟು ಬೇಗ ಮುಗಿಯಲಿದ್ದು, ಎಫ್.ಎಸ್.ಎಲ್ ವರದಿ ಜೊತೆಗೆ ಬ್ಲೂಟೂಟ್ ವಿಚಾರ ಪತ್ತೆ ಸ್ವಲ್ಪ ತಡವಾಗಿದೆ. ಬ್ಲೂಟೂತ್ ಕಂಡು ಹಿಡಿದು ಅದರ ಟವರ್ ಲೊಕೇಶನ್ ಪತ್ತೆ ಹಚ್ಚಬೇಕಿದೆ. ಹಗರಣದಲ್ಲಿ ತಪ್ಪು ಮಾಡಿದವರನ್ನು ಜೈಲಿಗೆ ಅಟ್ಟಬೇಕಿದೆ. ಈಗಾಗಲೇ ಪರೀಕ್ಷೆ ಬರೆದ 54 ಸಾವಿರ ಜನರಿಗೆ ಹೊಸದಾಗಿ ಪರೀಕ್ಷೆ ನಡೆಸಲಾಗುವುದು, ಉಳಿದವರಿಗೆ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಡಿವೈಎಸ್ಪಿ ಸೇರಿದಂತೆ ಎಲ್ಲರನ್ನೂ ಬಂಧಿಸಲಾಗಿದೆ. ಅವರ ಯೂನಿಫಾರಂ ಕಳಚಿ ಲಾಕಪ್ ಒಳಗೆ ಇಡಲಾಗಿದೆ" ಎಂದರು.
ಅನೈತಿಕ ಸಂಬಂದಿಂದ ಶಿವಸೇನೆ ಸರಕಾರ ರಚನೆ
"ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಮಾಡಿದುಣ್ಣೋ ಮಹಾರಾಯ ಎನ್ನುವ ಸ್ಥಿತಿ ಎದುರಾಗಿದೆ. 2019 ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಉದ್ಭವ್ ಠಾಕ್ರೆ ಬಳಿಕ ಅಧಿಕಾರದ ಆಸೆಗೋಸ್ಕರ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಜೊತೆಗೆ ಅನೈತಿಕ ಸಂಬಂಧ ಬೆಳೆಸಿ ಅಧಿಕಾರಕ್ಕೆ ಬಂದಿದ್ದರು. ಆದರೆ ಜನರ ತೀರ್ಪಿಗೆ ವಿರುದ್ಧವಾಗಿ ನಡೆದಿದ್ದ ಉದ್ಭವ್ ಠಾಕ್ರೆಯನ್ನು ಇದೀಗ ಅಧಿಕಾರದಿಂದ ಕೆಳಗಿಸುವುದನ್ನೂ ಅವರದೇ ಪಕ್ಷದವರು ಮಾಡುತ್ತಿದ್ದಾರೆ" ಎಂದು ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು.
Recommended Video