ಯುವಕ-ಯುವತಿ ನಡುವಿನ ಆ ಒಂದು ಮೆಸೇಜ್ಗೆ ಮಂಗಳೂರು ಏರ್ಪೋರ್ಟ್ ಶಾಕ್
ಮಂಗಳೂರು, ಆಗಸ್ಟ್ 15: 'you're the bomber' ಎಂಬ ಈ ಒಂದು ಲೈನ್ ವಾಟ್ಸ್ ಆ್ಯಪ್ ಮೆಸೇಜ್ ಮಂಗಳೂರು ವಿಮಾನ ನಿಲ್ದಾಣವನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿತ್ತು. ಯುವಕ - ಯುವತಿಯ ನಡುವೆ ಹಾಸ್ಯದ ರೀತಿಯಲ್ಲಿ ನಡೆದ ವಾಟ್ಸ್ ಆ್ಯಪ್ ಚಾಟಿಂಗ್ ನಿಂದ ವಿಮಾನ ನಿಲ್ದಾಣದ ಭದ್ರತೆಗೆ ತೊಡಕಾಗಿದೆ ಎಂಬ ಆತಂಕಕ್ಕೆ ದೂಡಿತ್ತು. ಇದೀಗ ಈ ಜೋಡಿಯನ್ನು ಬಜ್ಪೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ರವಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಿಪಿಯಾನ್ ಮಾಜಿ ಎಂಬ ಯುವಕನ ಮೊಬೈಲ್ ಗೆ ಸಿಮ್ರಾನ್ ಟಾಮ್ ಎಂಬ ಯುವತಿ 'you are the bomber' ಎಂಬ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶವನ್ನು ನೋಡಿದ ಸಹ ಪ್ರಯಾಣಿಕರಾದ ಸಿಮ್ರಾನ್ ಶೆಟ್ಟಿಯ ಎಂಬುವರು ತಕ್ಷಣ ಇಂಡಿಗೋ ವಿಮಾನದ ಸಿಬ್ಬಂಧಿಗೆ ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಹ ಪ್ರಯಾಣಿಕನ ಮೇಸೆಜ್ ನೋಡಿದಕ್ಕೆ ವಿಮಾನವೇ ನಿಲುಗಡೆ
ಈ ವಿಚಾರ ಇಂಡಿಗೋ ಮ್ಯಾನೇಜರ್ ಕೆ.ಪಿ.ಬೋಪಣ್ಣರಿಗೆ ತಲುಪಿದ್ದು. ತಕ್ಷಣ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದು ಸಿಐಎಸ್ಎಫ್ ಸಿಬ್ಬಂದಿ ಮೂಲಕ ವಿಮಾನದಲ್ಲಿ ಪರಿಶೀಲನೆ ನಡೆಸಿದ್ದಾರೆ. ಟೇಕ್ ಆಫ್ ಗೆ ಸಿದ್ದವಾಗಿದ್ದ ಮುಂಬೈ ವಿಮಾನವನ್ನು ತಡೆದು ಎಲ್ಲಾ ಪ್ರಯಾಣಿಕರನ್ನು ಇಳಿಸಿ ತೀವ್ರ ತಪಾಸಣೆ ನಡೆಸಲಾಗಿದೆ.
ಅಲ್ಲದೇ ಮೆಸೇಜ್ ಬಂದಿರುವ ದಿಪಿಯಾನ್ ಮಾಜಿ ಎಂಬ ಯುವಕನ ಮೊಬೈಲ್ ತಪಾಸಣೆ ನಡೆಸಿದ್ದು, ಮೆಸೇಜ್ ಕಳುಹಿಸಿದ ಯುವತಿ ಕೂಡ ಅದೇ ಏರ್ ಪೋರ್ಟ್ ನಲ್ಲಿ ಬೆಂಗಳೂರು ತೆರಳುವ ವಿಮಾನದಲ್ಲಿ ಇರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನೂ ವಶಕ್ಕೆ ಪಡೆದು ವಿಮಾನ ತಪಾಸಣೆ ನಡೆಸಲಾಗಿದೆ. ಕೊನೆಗೆ ಇದೊಂದು ತಮಾಷೆ ಸಂದೇಶ ಎಂಬುವು ಗೊತ್ತಾದ ಬಳಿಕ ಹಾಗೂ ತೀವ್ರ ತಪಾಸಣೆ ನಂತರ 6 ಗಂಟೆ ತಡವಾಗಿ ವಿಮಾನ ಮತ್ತೆ ಹಾರಾಟ ನಡೆಸಿದೆ.
ವಿಮಾನದೊಳಗೆ ಸಿಗರೇಟು ಸೇದಿದ ವ್ಯಕ್ತಿ: ಕ್ರಮಕ್ಕೆ ಸಚಿವರ ಸೂಚನೆ
ಯೂ ಆರ್ ದಿ ಬಾಂಬರ್ ಎಂಬ ಒಂದು ಪದದ ಸಂದೇಶ ಇಡೀ ವಿಮಾನ ನಿಲ್ದಾಣವನ್ನು ಆತಂಕಕ್ಕೆ ತಳ್ಳಿತ್ತು. ಸದ್ಯ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಇಂಡಿಗೋ ವಿಮಾನದ ಮ್ಯಾನೇಜರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಐಪಿಸಿ 505(1)(b) ಮತ್ತು (c) ನಡಿ ಪ್ರಕರಣ ದಾಖಲಾಗಿದ್ದು, ಯುವಕ ಮತ್ತು ಯುವತಿ ವಿಚಾರಣೆ ಮುಂದುವರೆದಿದೆ.
ದಿಪಿಯಾನ್ ಮಾಜಿ ಮಣಿಪಾಲ ಐಐಟಿಯಲ್ಲಿ 2021 ರಲ್ಲಿ ವ್ಯಾಸಂಗ ಮಾಡಿದ್ದು, ಸಿಮ್ರಾನ್ ಟಾಮ್ ಜೊತೆಗೆ ಮಣಿಪಾಲಕ್ಕೆ ಬಂದಿದ್ದರು. ದಿಪಿಯಾನ್ ಗುಜರಾತ್ನ ವಡೋದರದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಸಿಮ್ರಾನ್ ಟಾಮ್ ಚೆನ್ನೈ ಗೋಪಲಪುರಂನಲ್ಲಿ ಸೆಲ್ವ ಮೇರಿಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಎ. ( ಹೆಚ್ಆರ್) ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಭಾನುವಾರ ಸಿಮ್ರಾನ್ ಟಾಮ್ ಬೆಂಗಳೂರು ತೆರಳಿ ಅಲ್ಲಿಂದ ಚೆನ್ನೈಗೆ ಹೋಗಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ದಿಪಿಯಾನ್ ಮುಂಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರೆಂದು ತಿಳಿದುಬಂದಿದೆ.