ಮಂಗಳೂರು ವಿವಿ ಕಾಲೇಜಿನಲ್ಲಿ ಮತ್ತೊಂದು ವಿವಾದದ ಅಲೆ?
ಮಂಗಳೂರು, ಆಗಸ್ಟ್, 10: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮತ್ತೆ ಹೊಸ ವಿವಾದ ಆರಂಭವಾಗಿದೆ. ಕಾಲೇಜಿನ ವಿದ್ಯಾರ್ಥಿ ಸಂಘ ಗುರುವಾರ ಕಾಲೇಜಿನಲ್ಲಿ 'ಭಾರತ ಮಾತಾ ಪೂಜನಾ' ಕಾರ್ಯಕ್ರಮ ಆಯೋಜಿಸಿದೆ. ಇದಕ್ಕೆ ಸಿಎಫ್ಐ, ಎನ್ಎಸ್ಯುಐ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮವನ್ನು ರದ್ದು ಮಾಡಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅವರಿಗೆ ಮನವಿ ಮಾಡಿದ್ದಾರೆ.
ಹಿಜಾಬ್ ವಿವಾದದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮತ್ತೊಂದು ವಿವಾದ ಮುನ್ನಲೆಗೆ ಬಂದಿದೆ. ಕಾಲೇಜಿನ ವಿದ್ಯಾರ್ಥಿ ಸಂಘ ಆಯೋಜಿಸಿದ ಭಾರತ ಮಾತಾ ಪೂಜನಾ ಕಾರ್ಯಕ್ರಮಕ್ಕೆ ಇದೀಗ ತೀವ್ರ ವಿರೋಧ ಕೇಳಿಬಂದಿದೆ.
ವಿದ್ಯಾರ್ಥಿ ಸಂಘ ಗುರುವಾರ ಮಧ್ಯಾಹ್ನ ಎರಡು ಗಂಟೆಗೆ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಭಾರತ ಮಾತಾ ಪೂಜನಾ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಸಿಎಫ್ಐ ಸೇರಿದಂತೆ ಇತರ ವಿದ್ಯಾರ್ಥಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಅಖಂಡ ಭಾರತ ಪರಿಕಲ್ಪನೆಯ ಕೈಯಲ್ಲಿ ಭಗವಾಧ್ವಜ ಹಿಡಿದ ಭಾರತ ಮಾತೆಯ ಫೋಟೋ, ಧಾರ್ಮಿಕ ಸಂಕೇತಗಳನ್ನು ಪ್ರತಿನಿಧಿಸುವ ಯಾವುದೇ ಕಾರ್ಯಕ್ರಮ ಕಾಲೇಜಿನಲ್ಲಿ ಜರುಗಬಾರದು ಎನ್ನುವ ಕೂಗು ಎದ್ದಿದೆ. ಇದು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತಿದೆ ಎಂದು ಇತರ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
72 ವರ್ಷದ ನಿವೃತ್ತ ಶಿಕ್ಷಕ, 20 ವರ್ಷದ ವಿದ್ಯಾರ್ಥಿ ಕಾಮನ್ವೆಲ್ತ್ ಗೇಮ್ಸ್ನ ಸ್ವಯಂ ಸೇವಕರು!
ಎಬಿವಿಪಿ ಸ್ಪಷ್ಟನೆ: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘ ಮಾಡುತ್ತಿದೆ. ಈ ಬಾರಿಯೂ ಪ್ರಾಂಶುಪಾಲರ ಅನುಮತಿ ಪಡೆದು ಕಾರ್ಯಕ್ರಮ ಮಾಡಲಾಗುತ್ತಿದೆ. ಹಿಂದಿನಿಂದಲೂ ಬಂದ ಸಂಪ್ರದಾಯ ಮುರಿಯಲು ಸಾಧ್ಯ ಇಲ್ಲ. ಕ್ಷಣಕೊಮ್ಮೆ ಭಾರತ ಮಾತೆಯ ಧ್ವಜ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಎಬಿವಿಪಿ ಕ್ರಮಕ್ಕೆ ಆಕ್ರೋಶ: ಭಾರತ ಮಾತೆಯ ಹೆಸರಿನಲ್ಲಿ ಹಿಂದುತ್ವ ಸಿದ್ದಾಂತದ ಕಾರ್ಯಕ್ರಮವನ್ನು ಆಯೋಜಿಸಿರುವುದು ಖಂಡನೀಯ. ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ.
ಭಾರತದ ಭೂಪಟವನ್ನೇ ಬದಲಾಯಿಸಿ, ಭಗವಾಧ್ವಜ ಹಿಡಿದ ಮಹಿಳೆಯನ್ನು ಚಿತ್ರೀಕರಿಸಿ ದೇಶದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ. ಕಾಲೇಜು ಪ್ರಾಂಶುಪಾಲರ ಬೆಂಬಲದೊಂದಿಗೆ ಕಾಲೇಜು ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಎಬಿವಿಪಿ ಇದನ್ನು ಮಾಡಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ.
ಧಾರ್ಮಿಕ ಆಚರಣೆಗಳಿಗೆ ಅವಕಾಶ ಇಲ್ಲವೆಂದು ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಹಂಪನಕಟ್ಟೆ ಕಾಲೇಜು ಪ್ರಾಂಶುಪಾಲರಿಗೆ ಇದು ಧಾರ್ಮಿಕ ಆಚರಣೆಯಾಗಿ ಕಾಣೋದಿಲ್ವಾ? ಎಂದು ಪ್ರಶ್ನಿಸುವುದರ ಮೂಲಕ ಸಿಎಫ್ಐ ಆಕ್ರೋಶ ವ್ಯಕ್ತಪಡಿಸಿದೆ.
ಹಿಜಾಬ್ ವಿವಾದದಿಂದ ಸುದ್ದಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇದೀಗ ಭಾರತ ಮಾತಾ ಪೂಜನಾ ಕಾರ್ಯಕ್ರಮ ವಿವಾದದ ಕಿಚ್ಚು ಹಚ್ಚಿಸಿದೆ. ಈ ವಿವಾದ ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂಬುವುದನ್ನು ಕಾದುನೋಡಬೇಕಾಗಿದೆ.