ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದ ಅಣ್ಣಾಮಲೈ
ಮಂಗಳೂರು, ಜೂನ್ 17: ಕರ್ನಾಟಕದ ಸಿಂಗಂ, ಸೂಪರ್ ಕಾಪ್ ಹಾಗೂ ದಕ್ಷ ಅಧಿಕಾರಿ ಎಂದೇ ಜನಪ್ರಿಯರಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಖಾಕಿ ಗೆ ಗುಡ್ ಬೈ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಗೆ ರಾಜೀನಾಮೆ ನೀಡಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಇಂದಿಗೂ ಸ್ಪಷ್ಟತೆ ದೊರೆತಿಲ್ಲ.
ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ
ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಇನ್ನೊಂದು ಮಾಹಿತಿ ಪ್ರಕಾರ, ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ನಡುವೆ ಅಣ್ಣಾಮಲೈ ಶಬರಿಮಲೆಗೆ ವೀರ ಮಣಿಕಂಠನ ದರ್ಶನ ಮಾಡಲು ಬಂದಿದ್ದರು. ಕಪ್ಪು ಲುಂಗಿ, ಹೆಗಲಿಗೊಂದು ಕಪ್ಪು ಶಾಲು, ಬ್ಯಾಗ್ ಹಾಕಿ ಬರಿಗಾಲಲ್ಲಿ ಶಬರಿಮಲೆ ಬೆಟ್ಟ ಏರಿದರು.
ಬೆಳ್ಳಂಬೆಳಿಗ್ಗೆ ದಟ್ಟ ಮಂಜಿನ ನಡುವೆ ಶಬರಿಮಲೆ ಬೆಟ್ಟ ಹತ್ತಿದ ಅಣ್ಣಾಮಲೈ, 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಬೆಟ್ಟ ಹತ್ತುತ್ತಾ, ಇಳಿಯುತ್ತಾ ಮಾಲೆ ಹಾಕಿದ ಅಯ್ಯಪ್ಪ ಭಕ್ತರು ಸಾಮಾನ್ಯರಂತೆ ಬಂದಿದ್ದ ಅಣ್ಣಾಮಲೈ ಅವರನ್ನು ಗುರುತಿಸಿ ಅವರೊಂದಿಗೆ ಸೆಲ್ಫೀಗೆ ಮುಗಿಬಿದ್ದಿದ್ದರು.
ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ
ಕೇರಳದ ಸ್ಥಳೀಯ ಎಸ್ ಪಿ ಅಣ್ಣಾಮಲೈ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾಮಲೈ, ಬಹಳ ಸಮಯದಿಂದ ಶಬರಿಮಲೆಗೆ ಬರುವ ಸಂಕಲ್ಪ ಮಾಡಿದ್ದೆ. ಕೆಲಸದ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ಮುಂದೇನು ಅಂತ ಆಮೇಲೆ ಹೇಳ್ತೇನೆ. ಸದ್ಯ ದೇವರ ದರ್ಶನ ಮಾಡಿದ್ದೇನೆ ಎಂದು ಹೇಳಿ ಮುನ್ನಡೆದರು.