'ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ 27.29 ಲಕ್ಷ ಜನರಿಗೆ ಸಾಲ'
ಮಂಗಳೂರು, ಅಕ್ಟೋಬರ್ 16 : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ ಈವರೆಗೆ 27.29 ಲಕ್ಷ ಜನರಿಗೆ ಸಾಲ ನೀಡಲಾಗಿದ್ದು, ಮುದ್ರಾ ಯೋಜನೆಯಲ್ಲಿ ಕರ್ನಾಟಕಕ್ಕೆ ನಂಬರ್ 1 ಸ್ಥಾನ ಲಭಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.
ಎಸ್ಬಿಐನಿಂದ ಸಾಲ ಪಡೆಯುವವರಿಗೆ ಒಂದೊಳ್ಳೆ ಸುದ್ದಿ
ಮಂಗಳೂರಿನ ಪುರಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮುದ್ರಾ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರರು, "ಕಳೆದ 70 ವರ್ಷಗಳ ಇತಿಹಾಸದಲ್ಲಿ ಮುದ್ರಾ ಯೋಜನೆ ದೇಶದ ಅತಿದೊಡ್ಡ ಸಾಲ ವಿತರಣಾ ಯೋಜನೆಯಾಗಿದ್ದು, ದೇಶದಾದ್ಯಂತ ಈವರೆಗೆ ಒಟ್ಟು 8.4 ಕೋಟಿ ಜನರು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಈವರೆಗೆ 27.29 ಲಕ್ಷ ಜನರಿಗೆ ಸಾಲ ವಿತರಿಸಲಾಗಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ, ಮುದ್ರಾ ಯೋಜನೆ ಸಾಲ ಪಡೆದಿರುವ ಫಲಾನುಭವಿಗಳು ಶ್ರಮದಿಂದ ದುಡಿದು ಸಾಲವನ್ನು ಬ್ಯಾಂಕ್ ಗಳಿಗೆ ಮರು ಪಾವತಿಸಬೇಕು. ಸಾಲ ದೊರೆತಿದ್ದು ದುಡಿಯೋದಕ್ಕಾಗಿ ಉದ್ಯಮ ಸ್ಥಾಪಿಸಿ ಇತರರಿಗೂ ಉದ್ಯೋಗ ನೀಡಿ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ನೀತಿ ಆಯೋಗದ ಜಂಟಿ ಆಶ್ರಯದಲ್ಲಿ ಮುದ್ರಾ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.
ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ಅಂಗವಾಗಿ ಮುದ್ರಾ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.