ಮಂಗಳೂರಿನ ಶಿಲ್ಪಾರ ಯಶೋಗಾಥೆ ಮೆಚ್ಚಿದ ಆನಂದ್ ಮಹೀಂದ್ರ
ಮಂಗಳೂರು, ಜನವರಿ 8: ಬದುಕು ಎನ್ನುವುದು ಯುದ್ದ ಭೂಮಿ. ಇಲ್ಲಿ ಎದುರಾಗುವ ಕಷ್ಟಗಳಿಗೆ ಹೆದರಿ ಬೆನ್ನು ತೋರಿಸಿದರೆ ಬದುಕು ದುರಂತದಲ್ಲಿಯೇ ಅಂತ್ಯವಾಗುತ್ತದೆ. ಆದರೆ ಎದೆಗುಂದದೇ ಮುನ್ನುಗ್ಗಿದರೆ ಬದುಕು ಹಸನಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಮಂಗಳೂರಿನ ಮಣ್ಣಗುಡ್ಡೆಯ ಹಳ್ಳಿಮನೆ ರೊಟ್ಟಿಸ್ ಮೊಬೈಲ್ ಕ್ಯಾಂಟೀನ್ ಮಾಲಕಿ ಶಿಲ್ಪಾ.
ಮಂಗಳೂರಿನ ಬೀದಿಯಲ್ಲಿ ರೊಟ್ಟಿ ಮಾರುವ ಶಿಲ್ಪಾರ ಯಶೋಗಾಥೆ ಈಗ ಮಹೀಂದ್ರ ಕಂಪನಿಯ ಮುಖ್ಯಸ್ಥರ ಗಮನ ಸೆಳೆದಿದೆ. ಮಾಧ್ಯಮದ ಮೂಲಕ ಈಕೆಯ ಸಾಧನೆ ಮತ್ತು ವೇದನೆಯ ಬಗ್ಗೆ ತಿಳಿದ ಮಹಿಂದ್ರ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರ ಟ್ವೀಟ್ ಮಾಡಿದ್ದು, ಮಹಿಳೆಯ ಉದ್ಯಮ ವಿಸ್ತರಣೆಗೆ ಅಗತ್ಯವುಳ್ಳ ಬೊಲೆರೋ ವಾಹನ ಒದಗಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಲ್ಪಾ ಈಗ ದೇಶದ ಗಮನ ಸೆಳೆದಿದ್ದಾರೆ.
ಹಾಸನದಿಂದ ಮಂಗಳೂರಿಗೆ
ಶಿಲ್ಪಾ ಮೂಲತಃ ಹಾಸನ ಜಿಲ್ಲೆಯವರು. ಕಷ್ಟವೆಂದರೆ ಏನೆಂದು ತಿಳಿಯದಂತೆ ತಂದೆ-ತಾಯಿ ಅವರನ್ನು ಸಾಕಿದ್ದರು. 2005ರಲ್ಲಿ ವಿವಾಹವಾದ ಬಳಿಕ ಅವರು ಮಂಗಳೂರಿಗೆ ಬಂದರು. ಅವರ ಪತಿ ನಗರದಲ್ಲಿ ಟ್ರಾನ್ಸ್ಪೋರ್ಟ್ ವ್ಯವಹಾರ ನಡೆಸುತ್ತಿದ್ದರು.
ಹೋದವರು ಬರಲೇ ಇಲ್ಲ
ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿಗೆ, ಶಿಲ್ಪಾ ಅವರ ಬದುಕಿನ ದಿಕ್ಕೇ ಬದಲಾಯಿತು.
ಕಷ್ಟದಿಂದಾಗಿ ಕೈಯಲ್ಲಿದ್ದ ದುಡ್ಡು ಕರಗಿತು. ಶಿಲ್ಪಾ ಅವರ ಪತಿ ಬೆಂಗಳೂರಿನಿಂದ ತನಗೆ ಯಾವುದೋ ದುಡ್ಡು ಬರುವುದಿದೆ ಅದನ್ನು ತರುತ್ತೇನೆ ಎಂದು ಹೇಳಿ ಹೋದವರು ಮರಳಿ ಬರಲಿಲ್ಲ.
ಮೊಳಕೆಯೊಡೆದ ಸ್ವಂತ ಉದ್ಯೋಗದ ಕನಸು
ಪತಿಗಾಗಿ ಕಾದು-ಕಾದು ಶಿಲ್ಪಾ ಸುಸ್ತಾದರು. ಕೈಯಲ್ಲಿ ಉಳಿದಿದ್ದ ಅಲ್ಪಸ್ವಲ್ಪ ಹಣವೂ ಕರಗಿತು. ಶಿಲ್ಪಾಳ ತಂದೆ-ತಾಯಿ ಮಗಳ ಜೊತೆ ಬಂದು ನೆಲೆಸಿದರು. ಕೆಲಸಕ್ಕೆ ಸೇರಿದರೂ ಮನೆ ನಿರ್ವಹಣೆ ಕಷ್ಟವಾಯಿತು. ಆಗಲೇ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಲೋಚನೆ ಶಿಲ್ಪಾ ಅವರಲ್ಲಿ ಮೊಳಕೆಯೊಡೆಯಿತು.
ಕೈ ಹಿಡಿದ ರುಚಿಯಾದ ಅಡುಗೆ
ಶಿಲ್ಪಾ ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅವರು, ಬೀದಿ ಬದಿಯ ಮೊಬೈಲ್ ಕ್ಯಾಂಟೀನ್ ತೆರೆಯಲು ನಿರ್ಧರಿಸಿದರು. ಹಾಗೆ ಶಿಲ್ಪಾರ ಕ್ಯಾಂಟೀನ್ ಪರಿಕಲ್ಪನೆ ಜನ್ಮ ತಾಳಿತು. ಆದರೆ ಕ್ಯಾಂಟೀನ್ ಆರಂಭಿಸಲು ಸ್ವಲ್ಪ ಹಣ ಬೇಕಾಗಿತ್ತು.
ಹಳೆ ಬೊಲೆರೋದಲ್ಲಿ ಕ್ಯಾಂಟೀನ್
ಹಣಕ್ಕಾಗಿ ಬ್ಯಾಂಕಿನಿಂದ ಬ್ಯಾಂಕಿಗೆ ಅಲೆದಾಡಿದರು ಶಿಲ್ಪಾ. ಆದರೆ ಎಲ್ಲಿಯೂ ಸಾಲ ಸಿಗಲಿಲ್ಲ. ಮಗನ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿಟ್ಟಿದ್ದ 1 ಲಕ್ಷ ಹಣವನ್ನು ಬಂಡವಾಳ ಮಾಡಿಕೊಂಡು ಹಳೆಯ ಬೊಲೆರೋ ವಾಹನ ಖರೀದಿಸಿ ಕ್ಯಾಂಟೀನ್ ಆರಂಭಿಸಿದರು.
ಆರಂಭವಾಯ್ತು ಮೊಬೈಲ್ ಕ್ಯಾಂಟೀನ್
ಹೀಗೆ ಹಲವಾರು ಕಷ್ಟ ನಷ್ಟಗಳ ನಡುವೆ ಶಿಲ್ಪಾ ಅವರ ಮೊಬೈಲ್ ಕ್ಯಾಂಟೀನ್ ಆರಂಭವಾಯಿತು. ಈಗ ಕ್ಯಾಂಟೀನ್ನಲ್ಲಿ ಜೋಳ, ಅಕ್ಕಿ, ರಾಗಿ ರೊಟ್ಟಿ, ತಟ್ಟೆ ಇಡ್ಲಿ, ಬಿಸಿಬೇಳೆ ಬಾತ್, ಟೊಮೆಟೊ ರೈಸ್, ರಾಗಿ ಮುದ್ದೆ ಸಿಗುತ್ತದೆ. ರೊಟ್ಟಿ ಜೊತೆಗೆ ಶಿಲ್ಪಾ ಅವರು ತಯಾರಿಸುವ ಖಡಕ್ ಚಟ್ನಿ, ಹುರಿಗಡಲೆ ಚಟ್ನಿಗೆ ಭಾರೀ ಬೇಡಿಕೆ ಇದೆ. ಕ್ಯಾಂಟೀನ್ನಲ್ಲಿನ ಸೊಪ್ಪಿನ ಸಾರು, ಚಿಕನ್ ಸಾರು ಸಹ ಜನರನ್ನು ಆಕರ್ಷಿಸುತ್ತಿದೆ.
|
ಆನಂದ್ ಮಹೀಂದ್ರಾ ಕಣ್ಣಿಗೆ ಬಿದ್ದ ಕ್ಯಾಂಟೀನ್
ಬೊಲೆರೋ ವಾಹನ ಬಳಸಿ ಕ್ಯಾಂಟೀನ ಕಟ್ಟಿದ ಶಿಲ್ಪಾರ ಕಥೆ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾರ ಗಮನ ಸೆಳೆಯಿತು. "ಶಿಲ್ಪಾ ಯಶಸ್ಸಿನಲ್ಲಿ ಬೊಲೆರೋ ಸಣ್ಣ ಪಾತ್ರ ವಹಿಸಿರುವುದು ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಆಕೆ ಅಂದುಕೊಂಡಿರುವ ಎರಡನೇ ಘಟಕದ ಆರಂಭಕ್ಕೆ ನಾನು ಬೊಲೆರೋ ವಾಹನವನ್ನು ನೀಡುವುದರ ಮೂಲಕ ವೈಯಕ್ತಿಕವಾಗಿ ಬಂಡವಾಳ ಹೂಡಲಿದ್ದೇನೆ. ಈ ಮಾಹಿತಿಯನ್ನು ಆಕೆಗೆ ಯಾರಾದರೂ ವೈಯಕ್ತಿಕವಾಗಿ ತಿಳಿಸುತ್ತೀರಾ?" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.