ಬದುಕಿನೊಂದಿಗೆ ಬಡಿದಾಡಿದ ಶಿಲ್ಪಾಗೆ ಮಹಿಂದ್ರಾ ಉಡುಗೊರೆ
ಮಂಗಳೂರು, ಫೆಬ್ರವರಿ 06: ಮಂಗಳೂರಿನ ಬೀದಿಯಲ್ಲಿ ರೊಟ್ಟಿ ಮಾರುವ ಶಿಲ್ಪಾ ಅವರಿಗೆ ಪ್ರಖ್ಯಾತ ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರ ಬೊಲೆರೋ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಂಗಳೂರಿನ ಕೊಟ್ಟಾರದಲ್ಲಿರುವ ಬೊಲೆರೋ ಶೋ ರೂಮ್ ನಲ್ಲಿ ಶಿಲ್ಪಾ ಅವರಿಗೆ ಸರಳ ಸಮಾರಂಭ ಒಂದರಲ್ಲಿ ಬೊಲೆರೋ ಜೀಪ್ ಹಸ್ಥಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿಲ್ಪಾ ಬೊಲೆರೋ ವಾಹನ ಉಡುಗೊರೆಯಾಗಿ ನೀಡಿದ ಆನಂದ್ ಮಹೀಂದ್ರ ಅವರಿಗೆ ಧನ್ಯವಾದ ಸಮರ್ಪಿಸಿದರು. ಸದ್ಯಕ್ಕೆ ಮಣ್ಣಗುಡ್ಡ ದಲ್ಲಿ ಮೊಬೈಲ್ ಹಳ್ಳಿಮನೆ ರೊಟ್ಟಿಸ್ ಕ್ಯಾಂಟೀನ್ ನಡೆಸುತ್ತಿದ್ದೆನೆ. ಈಗ ಉಡುಗೊರೆಯಾಗಿ ಸಿಕ್ಕಿರುವ ಬೊಲೆರೋವನ್ನು ಬಳಸಿ ನಗರದಲ್ಲಿ ಇನ್ನೊಂದು ಹಳ್ಳಿಮನೆ ರೊಟ್ಟಿಸ್ ಕ್ಯಾಂಟೀನ್ ಆರಂಭಿಸಲು ಚಿಂತನೆ ನಡೆಸಿದ್ದೆನೆ ಎಂದು ಹೇಳಿದರು.
ಮಂಗಳೂರಿನ ಶಿಲ್ಪಾರ ಯಶೋಗಾಥೆ ಮೆಚ್ಚಿದ ಆನಂದ್ ಮಹೀಂದ್ರ
ಹಾಸನ ಜಿಲ್ಲೆಯವರಾದ ಶಿಲ್ಪಾ ಅವರ ಯಶೋಗಾಥೆ ಮಹೀಂದ್ರ ಕಂಪನಿಯ ಮುಖ್ಯಸ್ಥರ ಗಮನ ಸೆಳೆದಿತ್ತು. ಮಾಧ್ಯಮದ ಮೂಲಕ ಈಕೆಯ ಸಾಧನೆ ಮತ್ತು ವೇದನೆಯ ಬಗ್ಗೆ ತಿಳಿದ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರ ಟ್ವೀಟ್ ಮಾಡಿ ಮಹಿಳೆಯ ಉದ್ಯಮ ವಿಸ್ತರಣೆಗೆ ಅಗತ್ಯವುಳ್ಳ ಬೊಲೆರೋ ವಾಹನ ಒದಗಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಲ್ಪಾ ದೇಶದ ಗಮನ ಸೆಳೆದಿದ್ದರು.
ನೊಂದ ಶಿಲ್ಪಾ ಎದುಗುಂದಲಿಲ್ಲ
ಶಿಲ್ಪಾ ಮೂಲತಃ ಹಾಸನ ಜಿಲ್ಲೆಯವರು. ಕಷ್ಟವೆಂದರೆ ಏನೆಂದು ತಿಳಿಯದಂತೆ ತಂದೆ-ತಾಯಿ ಅವರನ್ನು ಸಾಕಿದ್ದರು. 2005 ರಲ್ಲಿ ವಿವಾಹವಾದ ಬಳಿಕ ಅವರು ಮಂಗಳೂರಿಗೆ ಬಂದರು. ಪತಿ ನಗರದಲ್ಲಿ ಟ್ರಾನ್ಸ್ಪೋರ್ಟ್ ವ್ಯವಹಾರ ನಡೆಸುತ್ತಿದ್ದರು.ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿಗೆ, ಶಿಲ್ಪಾ ಅವರ ಬದುಕಿನ ದಿಕ್ಕೆ ಬದಲಾಯಿತು. ಕಷ್ಟದಿಂದಾಗಿ ಕೈಯಲ್ಲಿದ್ದ ದುಡ್ಡು ಕರಗಿತು ಶಿಲ್ಪಾ ಅವರ ಪತಿ ಬೆಂಗಳೂರಿನಿಂದ ತನಗೆ ಯಾವುದೋ ದುಡ್ಡು ಬರುವುದಿದೆ ಅದನ್ನು ತರುತ್ತೇನೆ ಎಂದು ಹೇಳಿ ಹೋದವರು ಮರಳಲಿಲ್ಲ. ಪತಿಗಾಗಿ ಕಾದು-ಕಾದು ಶಿಲ್ಪಾ ಸುಸ್ತಾದರು. ಕೈಯಲ್ಲಿದ್ದ ಹಣವೂ ಕರಗಿತು. ಶಿಲ್ಪಾಳ ತಂದೆ ತಾಯಿ ಮಗಳ ಜೊತೆ ಬಂದು ನೆಲೆಸಿದರು. ಕೆಲಸಕ್ಕೆ ಸೇರಿದರೂ ಮನೆ ನಿರ್ವಹಣೆ ಕಷ್ಟವಾಯಿತು.
ಅಡುಗೆಯೇ ಜೀವನಾಧಾರ
ಆಗಲೇ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಲೋಚನೆ ಶಿಲ್ಪಾ ಅವರಲ್ಲಿ ಮೊಳಕೆಯೊಡೆದ್ದಿತು. ಶಿಲ್ಪಾ ಅವರು ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅವರು, ಬೀದಿ ಬದಿಯ ಮೊಬೈಲ್ ಕ್ಯಾಂಟೀನ್ ತೆರೆಯಲು ನಿರ್ಧರಿಸಿದರು. ಹಣಕ್ಕಾಗಿ ಬ್ಯಾಂಕಿನಿಂದ ಬ್ಯಾಂಕಿಗೆ ಅಲೆದಾಡಿದರು. ಆದರೆ ಎಲ್ಲಿಯೂ ಸಾಲ ಸಿಗಲಿಲ್ಲ. ಮಗನ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿಟ್ಟಿದ್ದ 1 ಲಕ್ಷ ಹಣವನ್ನು ಬಂಡವಾಳ ಮಾಡಿಕೊಂಡು ಹಳೆಯ ಬೊಲೆರೋ ವಾಹನ ಖರೀದಿಸಿ ಕ್ಯಾಂಟೀನ್ ಆರಂಭಿಸಿದರು. ಆರಂಭವಾಯಿತು ಮೊಬೈಲ್ ಕ್ಯಾಂಟೀನ್ ಹಲವಾರು ಕಷ್ಟ ನಷ್ಟಗಳ ನಡುವೆ ಶಿಲ್ಪಾ ಅವರ ಮೊಬೈಲ್ ಕ್ಯಾಂಟೀನ್ ಆರಂಭವಾಯಿತು.
ಮುದ್ದೆ, ಸೊಪ್ಪಿನ ಸಾರು, ಖಡಕ್ ಚಟ್ನಿ
ಈಗ ಕ್ಯಾಂಟೀನ್ನಲ್ಲಿ ಜೋಳ, ಅಕ್ಕಿ, ರಾಗಿ ರೊಟ್ಟಿ, ತಟ್ಟೆ ಇಡ್ಲಿ, ಬಿಸಿಬೇಳೆ ಬಾತ್, ಟೊಮೆಟೊ ರೈಸ್, ರಾಗಿ ಮುದ್ದೆ ಸಿಗುತ್ತದೆ. ರೊಟ್ಟಿ ಜೊತೆಗೆ ಶಿಲ್ಪಾ ಅವರು ತಯಾರಿಸುವ ಖಡಕ್ ಚಟ್ನಿ, ಹುರಿಗಡಲೆ ಚಟ್ನಿಗೆ ಭಾರಿ ಬೇಡಿಕೆ ಇದೆ. ಕ್ಯಾಂಟೀನ್ನಲ್ಲಿನ ಸೊಪ್ಪಿನಸಾರು, ಚಿಕನ್ ಸಾರು ಸಹ ಜನರನ್ನು ಆಕರ್ಷಿಸುತ್ತದೆ.
ಶಿಲ್ಪಾ ಅವರು ಮಾದರಿಯಾಗಲಿ
ಬದುಕು ಎನ್ನುವುದು ಯುದ್ದ ಭೂಮಿ. ಇಲ್ಲಿ ಎದುರಾಗುವ ಕಷ್ಟಗಳಿಗೆ ಹೆದರಿ ಬೆನ್ನುತೋರಿಸಿದರೆ ಬದುಕು ದುರಂತದಲ್ಲಿಯೇ ಅಂತ್ಯವಾಗುತ್ತದೆ, ಆದರೆ ಎದೆಗುಂದದೇ ಮುನ್ನುಗ್ಗಿದರೆ ಬದುಕು ಹಸನಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಮಂಗಳೂರಿನ ಮಣ್ಣಗುಡ್ಡೆಯ ಹಳ್ಳಿಮನೆ ರೊಟ್ಟಿಸ್ ಮೊಬೈಲ್ ಕ್ಯಾಂಟೀನ್ ಮಾಲಕಿ ಶಿಲ್ಪಾ. ಶಿಲ್ಪಾ ಅವರ ಜೀವನ ಸಂಘರ್ಷ ಇನ್ನಷ್ಟು ಜನರಿಗೆ ಆದರ್ಶವಾಗಲಿ ಎಂಬುದೇ ಎಲ್ಲರ ಆಶಯ.