ಮೋದಿ 'ಮನ್ ಕೀ ಬಾತ್' ಪ್ರೇರಣೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಕೆರೆ ನಿರ್ಮಿಸಿದ ವೃದ್ಧ
ಮಂಗಳೂರು, ಮೇ 12: ಎಷ್ಟು ಸಂಪಾದಿಸಿದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರುವುದಿಲ್ಲ. ಆಸ್ತಿ, ಹಣ ಇದ್ದರೂ ಮತ್ತೂ ಬೇಕು ಅನ್ನುವ ಮನೋಭಾವ ಸರ್ವೇ ಸಾಮಾನ್ಯವಾಗಿದೆ. ಆದರೆ ಮಂಗಳೂರಿನ ಓರ್ವ ವ್ಯಕ್ತಿಯ ಗುರಿ ಮಾತ್ರ ಬಹಳ ವಿಶೇಷವಾಗಿದೆ. ಅಂತರ್ಜಲವನ್ನು ವೃದ್ಧಿಸುವ ನಿಟ್ಟಿನಲ್ಲಿ ತಾನು ದುಡಿದಿಟ್ಟು ಉಳಿಸಿದ ಹಣದಲ್ಲಿ ವಿಶಾಲವಾದ ಕೆರೆ ನಿರ್ಮಿಸಿ ಕುತೂಹಲ ಮೂಡಿಸಿದ್ದಾರೆ.
ಮಂಗಳೂರು ನಗರ ಹೊರವಲಯದ ಸುರತ್ಕಲ್ ಸಮೀಪದ ಕುಲ್ಲಂಗಾಲು ನಿವಾಸಿ ಮಾಧವ ಭಟ್ ಈ ವಿಶಿಷ್ಟ ಪರಿಕಲ್ಪನೆಯ ವ್ಯಕ್ತಿ. ಮಾಧವ ಭಟ್ಟರ ಕನಸಿನಂತೆ ತನ್ನ ಎರಡೂವರೆ ಎಕರೆ ಪ್ರದೇಶದಲ್ಲಿ ವಿಶಾಲವಾದ ಕೆರೆಯನ್ನು ನಿರ್ಮಿಸಿದ್ದಾರೆ. ಸಿಮೆಂಟ್ ವಿತರಣೆದಾರರಾಗಿ ಕಂಪನಿಯೊಂದಕ್ಕೆ ದುಡಿಯುತ್ತಿದ್ದ ಮಾಧವ ಭಟ್ಟರು, ಕೆಲವು ವರ್ಷಗಳ ಹಿಂದೆಯಷ್ಟೇ ಕೆಲಸದಿಂದ ನಿವೃತ್ತಿಯಾಗಿದ್ದರು.
ತಮ್ಮ 60 ವರ್ಷಕ್ಕೆ ಕೆರೆಯೊಂದನ್ನು ನಿರ್ಮಿಸಬೇಕೆಂಬ ಗುರಿ ಹೊಂದಿದ್ದ ಮಾಧವ ಭಟ್, ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಿ ವಿಶಾಲವಾದ ಕೆರೆ ನಿರ್ಮಿಸಿದ್ದಾರೆ.
ಕೆರೆಯು 30 ಅಡಿ ಆಳ, 125 ಅಡಿ ಅಗಲ, 140 ಅಡಿ ಉದ್ದವಿದ್ದು, ಈ ಕೆರೆಯಲ್ಲಿ 1 ಕೋಟಿ 75 ಲಕ್ಷ ಲೀಟರ್ ನೀರು ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಜೀವನದ ಸಂಧ್ಯಾ ಕಾಲದಲ್ಲಿ ಬೇರೆ ಬೇರೆ ಆಸೆಗಳನ್ನು ಹೊಂದುವ ಜನರ ಮಧ್ಯೆ ಮಾಧವ ಭಟ್ ರವರ ಆಸೆ ಬಹಳ ವಿಶಿಷ್ಟವಾಗಿದೆ.
ಮಾಧವ ಭಟ್ ರವರ ಈ ಯೋಚನೆಗೆ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವಂತೆ. ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಂತರ್ಜಲ ಉಳಿಸಲು ಕರೆ ನೀಡಿದ್ದು, ಇದರ ಪ್ರೇರಣೆ ಮತ್ತು ತಮ್ಮ ಆಧ್ಯಾತ್ಮಿಕ ಚಿಂತನೆಯಿಂದ ಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.
ಈ ವಿಶಾಲದವಾದ ಕೆರೆಗೆ ಸುತ್ತಲೂ ಕಾಂಕ್ರೀಟ್ ಬದು ಹಾಕಿದ್ದು, ಮಳೆಗಾಲದಲ್ಲಿ ಗುಡ್ಡದ ನೀರು ಸರಾಗವಾಗಿ ಕೆರೆಗೆ ಹರಿದು ಬರಲು ವ್ಯವಸ್ಥೆ ಮಾಡಲಾಗಿದೆ. ಕೆರೆ ನಿರ್ಮಾಣದ ವೇಳೆಯಲ್ಲಿ ಕೆರೆಯ ಮಧ್ಯದಲ್ಲಿ ನೀರಿನ ಒಸರು ಕಂಡಿದ್ದು, ಕೆರೆಯ ನಡುವಲ್ಲೇ ಸುಂದರ ಬಾವಿಯನ್ನು ನಿರ್ಮಿಸಲಾಗಿದೆ.
ಒಟ್ಟಿನಲ್ಲಿ ಕೇವಲ ಆಸ್ತಿ ಮಾಡುವುದೇ ಜೀವನದ ಪರಮೋದ್ದೇಶ ಅಂತಾ ತಿಳಿದುಕೊಂಡವರ ಮಧ್ಯೆ ಮಾಧವ ಭಟ್ಟರು ಮಾತ್ರ ಇದಕ್ಕೆ ಅಪವಾದ ಎಂಬಂತೆ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದಾರೆ. ದುಡಿದ ಎಲ್ಲಾ ಹಣದಲ್ಲಿ ಕೆರೆ ನಿರ್ಮಿಸಿ ಮಾದರಿಯಾಗಿದ್ದಾರೆ.