ಮಂಗಳೂರಿನಲ್ಲಿ ನಡೆದ ಆರ್ಎಸ್ಎಸ್ ಬೈಠಕ್ ನಲ್ಲಿ ತಡರಾತ್ರಿವರೆಗೆ ರಹಸ್ಯ ಮಾತುಕತೆ ನಡೆಸಿದ ಅಮಿತ್ ಶಾ
Recommended Video
ಮಂಗಳೂರು, ನವೆಂಬರ್. 15: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಆರ್ಎಸ್ಎಸ್ ಮುಖಂಡರ ಸಭೆ ನಿನ್ನೆ (ನ.14) ತಡರಾತ್ರಿವರೆಗೆ ನಡೆದಿದೆ. ಸಂಜೆ 8 :30ಕ್ಕೆ ಮಂಗಳೂರಿಗೆ ಬಂದಿಳಿದ ಅಮಿತ್ ಶಾ ನೇರವಾಗಿ ಮಂಗಳೂರಿನ ಮಣ್ಣಗುಡ್ಡದಲ್ಲಿರುವ ಸಂಘನಿಕೇತನಕ್ಕೆ ತೆರಳಿದರು.
ಆರ್ ಎಸ್ಎಸ್ ನ ದಕ್ಷಿಣದ ಶಕ್ತಿಕೇಂದ್ರ ಸಂಘನಿಕೇತನದಲ್ಲಿ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಪ್ರಚಾರಕ್ ಪ್ರಮುಖರೊಂದಿಗೆ ತಡರಾತ್ರಿ 1 ಗಂಟೆವರೆಗೆ ಸಭೆ ನಡೆದಿದ್ದು, ಸತತ ನಾಲ್ಕು ಗಂಟೆಗಳ ಕಾಲ ಆರ್ಎಸ್ಎಸ್ ಮುಖಂಡರ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.
ಮಂಗಳೂರಿಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ
ಸಭೆಯಲ್ಲಿ ಆರ್ ಎಸ್ಎಸ್ ಪ್ರಮುಖರಾದ ಭಯ್ಯಾಜಿ ಜೋಶಿ, ಮುಕುಂದ್, ಸಂತೋಷ್ ಸೇರಿದಂತೆ 4 ರಾಜ್ಯಗಳ ಸಂಘಟನಾ ಕಾರ್ಯದರ್ಶಿಗಳ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. 4 ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಅಮಿತ್ ಶಾ ನಗರದ ಓಷಿಯನ್ ಪರ್ಲ್ ಹೋಟೆಲ್ ಗೆ ತೆರಳಿ ವಾಸ್ತವ್ಯ ಹೂಡಿದರು.
ಸಂಘನಿಕೇತನದಲ್ಲಿ ನಡೆದ ಸಭೆಯಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಆರ್ಎಸ್ಎಸ್ ಪ್ರಮುಖರ ಜತೆ ಅಮಿತ್ ಶಾ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಶಬರಿಮಲೆ ಅಯ್ಯಪ್ಪ ಭಕ್ತರ ಪರ ನಾವಿದ್ದೇವೆ: ಅಮಿತ್ ಶಾ
ಸಭೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಹಾಗೂ ಶಬರಿಮಲೆ ಹೋರಾಟ ಸೇರಿದಂತೆ ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಆರ್ ಎಸ್ಎಸ್ ಮುಖಂಡರು ಅಮಿತ್ ಶಾ ಅವರಿಗೆ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ ಎಂದು ಆರ್ ಎಸ್ ಎಸ್ ಮೂಲಗಳು ತಿಳಿಸಿವೆ.
ಇಂದು ಗುರುವಾರ ವಿಶೇಷ ವಿಮಾನದ ಮೂಲಕ ಅಮಿತ್ ಶಾ ದೆಹಲಿಗೆ ಹಿಂದಿರುಗಲಿದ್ದಾರೆ.