ಜೆಡಿಎಸ್ ಜೊತೆ ಮೈತ್ರಿ;ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಸುಲಭವೇ?
Recommended Video
ಮಂಗಳೂರು, ಮಾರ್ಚ್ 18:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಮೈತ್ರಿ ವರದಾನವಾಗಲಿದೆಯೇ? ಈ ಕುರಿತ ರಾಜಕೀಯ ವಿಶ್ಲೇಷಣೆ ಆರಂಭವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರೋದ್ರಿಂದ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ ಮತಬ್ಯಾಂಕ್ ಹೆಚ್ಚಲಿದೆಯಾ?ಎಂಬ ಒಂದು ಪ್ರಶ್ನೆ ಮೂಡಲಾರಂಭಿಸಿದೆ.
ಮೈತ್ರಿ ತೀರ್ಮಾನದ ಪ್ರಕಾರ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಗೆ ಬೆಂಬಲ ಸೂಚಿಸಲಿದೆ. ಅದಲ್ಲದೇ, ಪ್ರಚಾರ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಳ್ಳಲಿದೆ. ಈ ಸಾಂಗತ್ಯ ಕಾಂಗ್ರೆಸ್ ಗೆ ಲಾಭವನ್ನೇ ತಂದುಕೊಡುವ ನಿರೀಕ್ಷೆಯಿದೆ.
1991 ರ ಚುನಾವಣೆ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆ. ಇಲ್ಲಿ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸುವ ಕನಸನ್ನು ಕಾಂಗ್ರೆಸ್ ಕಾಣುತ್ತಲೇ ಬಂದಿದೆ. ಒಟ್ಟು 7 ಬಾರಿ ಬಿಜೆಪಿ ಸಂಸದರೇ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ. ಈ ಬಾರಿ ಹಾಲಿ ಸಂಸದ ನಳಿನ್ ಕುಮಾರ್ ಮೇಲೆ ಸ್ವ ಪಕ್ಷದಲ್ಲೇ ಅಪಸ್ವರ ಕೇಳಿ ಬರುತ್ತಿದೆ.
ಜನಾರ್ದನ ಪೂಜಾರಿ ವಿರುದ್ಧ ಕ್ರಮಕ್ಕೆ ಜೆಡಿಎಸ್ ಒತ್ತಾಯ
ಕ್ಷೇತ್ರದಲ್ಲಿ ಆಗದ ಅನೇಕ ಅಪೂರ್ಣ ಕಾಮಗಾರಿಗಳ ತೂಗುಕತ್ತಿ ಒಂದೆಡೆಯಾದರೆ, ಟಿಕೆಟ್ ಆಕಾಂಕ್ಷಿಗಳ ಲಾಭಿ ಇನ್ನೊಂದೆಡೆ ನಳಿನ್ ಗೆ ಅಡ್ಡಗಾಲು ಹಾಕುತ್ತಿವೆ. ಇಂತಹ ಸಂದರ್ಭದಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿ ಆರಂಭವಾಗಿದೆ.
ಜೆಡಿಎಸ್ ವೋಟುಗಳು ಕಾಂಗ್ರೆಸ್ ಗೆ
ಕಾಂಗ್ರೆಸ್ ಬಿಜೆಪಿ ಮತಗಳ ಅಂತರ ಕಡಿಮೆಯಾದರೆ ಜೆಡಿಎಸ್ ವೋಟುಗಳು ಕಾಂಗ್ರೆಸ್ ಗೆ ಗೆಲುವಿನ ದಡ ತಲುಪಿಸಲಿವೆ ಎನ್ನುವ ಲೆಕ್ಕಾಚಾರ ಹಾಕಲಾಗುತ್ತಿದೆ. ಜೆಡಿಎಸ್ ಈವರೆಗೆ ಪಡೆದುಕೊಂಡ ಓಟುಗಳನ್ನು ಗಮನಿಸಿದರೆ 1999 ರಲ್ಲಿ ಚುನಾವಣೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಕೂಡಿಸಿದರೆ 59,704 ಮತಗಳು ಜೆಡಿಎಸ್ ಗೆ ದೊರೆತಿದ್ದವು.
ರಫೇಲ್ ಹಗರಣದ ಮಾಹಿತಿ ಕೈಪಿಡಿ ಮನೆ ಮನೆಗೆ ತಲುಪಿಸಲು ಕಾಂಗ್ರೆಸ್ ತಯಾರಿ
ಯಾವ ಸಮಯದಲ್ಲಿ ಎಷ್ಟು ವೋಟು?
ಜೆಡಿಎಸ್ 2004 ರಲ್ಲಿ ಗರಿಷ್ಟ 90,807 ವೋಟುಗಳು, 2008 ರಲ್ಲಿ 57,897, 2013 ರಲ್ಲಿ 45,789 ವೋಟುಗಳು ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಬಿಜೆಪಿ ಅಲೆ ಎದ್ದಿದ್ದರಿಂದ ಕೇವಲ 10,818 ವೋಟುಗಳನ್ನು ಗಳಿಸುವಲ್ಲಿ ಮಾತ್ರ ಜೆಡಿಎಸ್ ಸಫಲವಾಯಿತು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧೆ?
ಈ ಬಾರಿ ಮತ್ತೆ ಮರಳಿ ಪಡೆಯಲಿದೆ
ಹಿಂದಿನ ಲೋಕಸಭಾ ಚುನಾವಣೆಗಳನ್ನು ಗಮನಿಸಿದರೆ 2009 ಮತ್ತು 2014ರ ಚುನಾವಣೆಯಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.ಈ ಬಾರಿ ಜೆಡಿಎಸ್ ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರಿಂದ ಹಾಗೂ ರೈತರ ಸಾಲ ಮನ್ನಾ ಅಡಿಕೆ ಕೊಳೆರೋಗ ಪರಿಹಾರ ಧನವನ್ನು ಈಗಾಗಲೇ ರೈತರ ಖಾತೆಗೆ ಜಮಾ ಮಾಡಿರೋದ್ರಿಂದ ಈ ಹಿಂದೆ ಜೆಡಿಎಸ್ ಪಡೆಯುತ್ತಿದ್ದ ವೋಟುಗಳನ್ನು ಈ ಬಾರಿ ಮತ್ತೆ ಮರಳಿ ಪಡೆಯಲಿದೆ.
ಜೆಡಿಎಸ್ ಬೆಂಬಲದಿಂದ ಗೆಲುವು
ಈ ಹಿಂದಿನ ಮತದಾರರೆಲ್ಲ ಜೆಡಿಎಸ್ ಕಡೆಗೆ ವಾಲಿದ್ದಾರೆ. ಕಾಂಗ್ರೆಸ್ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜೆಡಿಎಸ್ ಬೆಂಬಲದಿಂದ ಗೆಲುವು ಸಾಧಿಸುವ ಲೆಕ್ಕಾಚಾರ ಕ್ಷೇತ್ರದಲ್ಲಿ ಆರಂಭವಾಗಿದೆ.