ಕೊರೊನಾ ಚಿಕಿತ್ಸೆಗೆ ಅಧಿಕ ಬಿಲ್ ಪಡೆದ ಆರೋಪ; ಆಸ್ಪತ್ರೆಗೆ ದ.ಕ.ಜಿಲ್ಲಾಡಳಿತ ತಂಡ ದಿಢೀರ್ ಭೇಟಿ
ಮಂಗಳೂರು, ಜುಲೈ 16: ಕೊರೊನಾ ವೈರಸ್ ಚಿಕಿತ್ಸೆಗೆ ದಾಖಲಾಗಿರುವವರಿಂದ ಅಧಿಕ ಬಿಲ್ ವಸೂಲಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಜಿಲ್ಲಾಡಳಿತದ ತಂಡ ಪರಿಶೀಲನೆಗೆಂದು ಭೇಟಿ ನೀಡಿತ್ತು.
Recommended Video
ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆಯು ಕೊರೊನಾ ರೋಗಿಗಳಿಂದ ಅಧಿಕ ಮೊತ್ತದ ಹಣವನ್ನು ಪಡೆಯುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಕೊರೊನಾ ರೋಗಿಗೆ 1,98,664 ರೂಪಾಯಿ ಬಿಲ್ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ಇಂಡಿಯಾನ ಆಸ್ಪತ್ರೆಯು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಕೊರೊನಾ ರೋಗಿಯ ಚಿಕಿತ್ಸೆಗೆ ಲಕ್ಷಕ್ಕೂ ಅಧಿಕ ಬಿಲ್ ವಸೂಲಿ ಮಾಡಿದ್ದರ ಕುರಿತು ದೂರು ಕೇಳಿಬಂದಿತ್ತು.
"ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಚಿಕಿತ್ಸೆ ದರ ಶಾಕ್ ಆಗುವಂತಿದೆ"
ಈ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ತಂಡ ಇಂದು ಆಸ್ಪತ್ರೆಗೆ ಭೇಟಿ ನೀಡಿತ್ತು. ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಆರೋಗ್ಯಾಧಿಕಾರಿಗಳಿದ್ದ ತಂಡ ಇಂದು ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಸಭೆ ನಡೆಸಿ ಮಾಹಿತಿ ಪರಿಶೀಲನೆ ನಡೆಸಿದರು.
ಆಸ್ಪತ್ರೆ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಅವರು ಬಿಲ್ ಬಗ್ಗೆ ಸ್ಪಷ್ಟನೆ ನೀಡಿದ್ದು, ಸರ್ಕಾರಕ್ಕೆ ಬಿಲ್ ಬಗ್ಗೆ ದಾಖಲೆ ನೀಡುವುದಾಗಿ ತಿಳಿಸಿದ್ದಾರೆ.