ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳು ಓಪನ್
ಮಂಗಳೂರು, ಜೂನ್ 22: ರಾಜ್ಯದಲ್ಲಿ ಕೋವಿಡ್ ಲಾಕ್ಡೌನ್ನಿಂದಾಗಿ ಕಳೆದ ಎರಡು ತಿಂಗಳಿಗಳ ಕಾಲ ಮನೆಯಲ್ಲೇ ಲಾಕ್ ಆಗಿದ್ದ ಜನರು ಈಗ ಲಾಕ್ಡೌನ್ ಸಡಿಲಿಕೆ ಆಗಿರುವುದರಿಂದ ಹೊರ ಬಂದಿದ್ದಾರೆ.
ಗ್ರಾಮೀಣ ಪ್ರದೇಶಗಳು ಸೇರಿದಂತೆ ನಗರ ಪ್ರದೇಶದಲ್ಲಿಯೂ ಜನಸಂದಣಿ ಹೆಚ್ಚಾಗುತ್ತಿದೆ. ಬಸ್ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳೂ ಓಡಾಟ ಆರಂಭಿಸಿವೆ. ಇದೀಗ ಜೂ.23ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು- ಧರ್ಮಸ್ಥಳ ಬಸ್ ತಡೆಹಿಡಿದ ಪೊಲೀಸರು; ಪ್ರಯಾಣಿಕರು ಅತಂತ್ರ
ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, "ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದಾರೆ. ಆದರೆ, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,'' ಎಂದು ಹೇಳಿದ್ದಾರೆ.
ಈಗಾಗಲೇ ಲಾಕ್ಡೌನ್ ಸಡಿಲಿಕೆ ಆಗಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ನಗರ ಪ್ರದೇಶಕ್ಕೂ ಹೊಸ ಕಳೆ ಬಂದಿದೆ. ಆದರೆ ಜನರು ಮಾತ್ರ ಸಾಮಾಜಿಕ ಅಂತರ ಮರೆತು ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಮತ್ತೆ ಕೊರೊನಾ ಸೋಂಕು ಹೆಚ್ಚಳದ ಆತಂಕ ಎದುರಾಗಿದೆ.
ಜಿಲ್ಲಾ ಕೇಂದ್ರ ಮಂಗಳೂರು ನಗರದಲ್ಲಿ ಕಳೆದೆರಡು ದಿನಗಳಿಂದ ಬಿರುಸಿನ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಬೆಳಗಿನ ಅವಧಿಯಲ್ಲಿ ಮಾರುಕಟ್ಟೆ ಪ್ರದೇಶ, ಸ್ಟೇಟ್ ಬ್ಯಾಂಕ್, ಕಾರ್ ಸ್ಟ್ರೀಟ್, ಕಂಕನಾಡಿ, ಬಂಟ್ಸ್ ಹಾಸ್ಟೆಲ್ ಮುಂತಾದೆಡೆ ಜನಜಂಗುಳಿ ಕಂಡು ಬರುತ್ತಿದೆ. ಬಹುತೇಕ ಜನರು ಮಾಸ್ಕ್ ಕೂಡ ಧರಿಸದೆ, ದೈಹಿಕ ಅಂತರ ಕಾಪಾಡದೇ ಓಡಾಡುತ್ತಿದ್ದಾರೆ.