ಕರಾವಳಿಗೆ ಇನ್ನಷ್ಟು ಸಚಿವ ಸ್ಥಾನ ಕೊಡಲು ಸಿಎಂಗೆ ಮನವಿ ಮಾಡಿದ್ದೇವೆ - ಕೋಟ ಶ್ರೀನಿವಾಸ್ ಪೂಜಾರಿ
ಮಂಗಳೂರು, ಆಗಸ್ಟ್ 22: "ಕರಾವಳಿ ಭಾಗಕ್ಕೆ ಸಚಿವ ಸ್ಥಾನ ನೀಡದ ಬಗ್ಗೆ ಅಸಮಾಧಾನವಿರುವ ವಿಚಾರ ತಿಳಿದಿದೆ. ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರು ಈ ಸಮಸ್ಯೆ ಸರಿಪಡಿಸಲಿದ್ದಾರೆ" ಎಂದು ಸಚಿವ ಕೋಟ ಶ್ರಿನಿವಾಸ್ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಮೊನ್ನೆ 17 ಮಂದಿಯನ್ನು ಮಾತ್ರ ಸಚಿವರನ್ನಾಗಿ ಮಾಡಲಾಗಿದೆ. ನಮ್ಮ ಸರಕಾರಕ್ಕೆ ಬೆಂಬಲ ಕೊಟ್ಟವರನ್ನು ನೋಡಿಕೊಂಡು ಸಂಪುಟ ರಚನೆ ಮಾಡಿದ್ದಾರೆ. ಹಾಗಿದ್ದರೂ ಕರಾವಳಿಗೆ ಹೆಚ್ಚು ಸಚಿವ ಸ್ಥಾನಗಳನ್ನು ಕೊಡಬೇಕೆನ್ನುವುದು ಸತ್ಯ. ಅನುಭವಿಗಳು, ಸಮರ್ಥ ಶಾಸಕರು ಕರಾವಳಿಯಲ್ಲಿ ಬಹಳಷ್ಟಿದ್ದಾರೆ. ಈ ಬಗ್ಗೆ ಸಿಎಂ ಭೇಟಿಯಾಗಿ ಕರಾವಳಿಗೆ ಸಚಿವ ಸ್ಥಾನ ಕೊಡಲು ಮನವಿ ಮಾಡಿದ್ದೇವೆ. ಸಿಎಂ ಕೂಡ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು.
6 ಬಾರಿ ಶಾಸಕರಾದರೂ ಸಚಿವರಾಗುವ ಭಾಗ್ಯವಿಲ್ಲ! ಅಂಗಾರ ಹೇಳಿದ್ದೇನು?
"ಸುಳ್ಯ ಶಾಸಕ ಅಂಗಾರ, ಕುಂದಾಪುರ ಶಾಸಕ ಹಾಲಾಡಿಯವರು ಅತ್ಯಂತ ಹಿರಿಯರು, ಅನುಭವಿಗಳು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ರಚಿಸಿದಾಗ ಸಮಸ್ಯೆಗಳಾಗಿದ್ದು ನಿಜ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ಸಮಸ್ಯೆ ಸರಿಪಡಿಸಲಿದ್ದಾರೆ" ಎಂದರು.
ಈ ಮೊದಲು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
"ನೆರೆ ಪರಿಸ್ಥಿತಿ ನಿಭಾಯಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿರುವ ಬಗ್ಗೆ ಮುಖ್ಯಮಂತ್ರಿಯವರು ತಿಳಿಸಿದ್ದಾರೆ" ಎಂದು ಅವರು ತಿಳಿಸಿದರು.