ಪ್ರವಾಹ ಹಿನ್ನೆಲೆ; ಈ ಬಾರಿಯ ಆಳ್ವಾಸ್ ನುಡಿಸಿರಿ ಹಾಗು ವಿರಾಸತ್ ಕಾರ್ಯಕ್ರಮ ರದ್ದು
ಮಂಗಳೂರು, ಆಗಸ್ಟ್ 28: "ರಾಜ್ಯವು ನೆರೆ ಹಾವಳಿಯಿಂದ ತತ್ತರಿಸಿ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಆಳ್ವಾಸ್ ಶಿಕ್ಣಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್ ಉತ್ಸವವನ್ನು ಈ ಬಾರಿ ರದ್ದು ಮಾಡಲಾಗಿದೆ" ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂದ ಮೋಹನ್ ಆಳ್ವ ತಿಳಿಸಿದ್ದಾರೆ.
ಮೂಡಬಿದರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನವೆಂಬರ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಆಳ್ವಾಸ್ ನುಡಿಸಿರಿ ಮತ್ತು ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ವಿರಾಸತ್ ಅನ್ನು ರದ್ದುಮಾಡಲಾಗಿದೆ" ಎಂದು ತಿಳಿಸಿದರು.
ನವೆಂಬರ್ 14ರಿಂದ ಆಳ್ವಾಸ್ ನುಡಿಸಿರಿ ವಿರಾಸತ್ 2019
"ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಸಾಹಿತ್ಯ ಪ್ರೇಮಿಗಳು ಆಗಮಿಸುತ್ತಿದ್ದರು. ರಾಜ್ಯವು ಪ್ರವಾಹದಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಸಂಭ್ರಮಪಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜನೆಗೆ ಇಟ್ಟಿದ್ದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು" ಎಂದು ಅವರು ಸ್ಪಷ್ಟಪಡಿಸಿದರು. ವಿರಾಸತ್-ನುಡಿಸಿರಿ ಕಾರ್ಯಕ್ರಮವನ್ನು ಮುಂದಿನ ವರ್ಷ ಆಚರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.