ಕೇರಳ ವಿಧಾನಸಭೆ: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಅಶ್ರಫ್
ಮಂಜೇಶ್ವರ, ಮೇ 24: ದ್ವಿಭಾಷಾ ಸಂಗಮ ಭೂಮಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಎ.ಕೆ.ಎಂ ಅಶ್ರಫ್ ಅವರು ಕೇರಳ ವಿಧಾನಸಭೆಯಲ್ಲಿ ಸೋಮವಾರ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಆ ಮೂಲಕ ಗಡಿನಾಡ ಕನ್ನಡಿಗನೆಂಬ ಅಭಿಮಾನ ಮೂಡಿಸಿದ್ದು, ಕಾಸರಗೋಡು ಜಿಲ್ಲೆಯ ಬಹುಸಂಖ್ಯಾತ ಕನ್ನಡಿಗರ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ. ಭೌಗೋಳಿಕವಾಗಿ ಕಾಸರಗೋಡು ಜಿಲ್ಲೆ ಕೇರಳ ರಾಜ್ಯಕ್ಕೆ ಸೇರಿದ್ದರೂ ಅಲ್ಲಿ ಕನ್ನಡ ಮಾತನಾಡುವವರು ಹೆಚ್ಚಾಗಿದ್ದಾರೆ.
ಮಂಜೇಶ್ವರ ಮಂಡಲವು ರೂಪುಗೊಂಡು ಮೂರೂವರೆ ದಶಕಗಳು ಕಳೆದರೂ ಇಲ್ಲಿನ ಭಾಷೆ, ಸಂಸ್ಕೃತಿ, ಪ್ರದೇಶ ಹಾಗೂ ಅಭಿವೃದ್ಧಿಯಲ್ಲಿ ಇನ್ನೂ ಹಿಂದುಳಿದೆ. ಅತೀ ಹೆಚ್ಚು ಜನಸಂಖ್ಯೆಯಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಗಾಗಿ ಜನರು ಎ.ಕೆ.ಎಂ ಅಶ್ರಫ್ರನ್ನು ಎದುರು ನೋಡುತ್ತಿದ್ದಾರೆ.
ಕೇರಳದ ಶಾಸನಸಭೆಯಲ್ಲಿ ಎ.ಕೆ.ಎಂ ಅಶ್ರಫ್ ಅಚ್ಚಗನ್ನಡಿಗರಾಗಿ, ಕನ್ನಡ ಭಾಷೆಯಲ್ಲಿ ಅಲ್ಲಾಹು (ದೇವರ)ನ ಹೆಸರಿನಲ್ಲಿ ಸತ್ಯ ಪ್ರತಿಜ್ಞೆಗೈದಿರುವುದು ಜನತೆಯಲ್ಲಿ ಒಂದಷ್ಟು ಭರವಸೆ ಹುಟ್ಟಿಸಿದೆ ಎಂದು ಹೇಳಬಹುದು.
ತನ್ನ ಹತ್ತನೇ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಇಷ್ಟಪಟ್ಟು ರಾಜಕೀಯ ಅಭಿರುಚಿಯೊಂದಿಗೆ ಸಾರ್ವಜನಿಕ ರಂಗಕ್ಕಿಳಿದ ಎ.ಕೆ.ಎಂ ಅಶ್ರಫ್ ಅವರು ಎಂಎಸ್ಎಫ್ನ ಪಂಚಾಯತ್, ಮಂಡಲ, ಜಿಲ್ಲಾ, ರಾಜ್ಯ ಸಮಿತಿ ಹೀಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿಕೊಂಡ ಎ.ಕೆ.ಎಂ ಅಶ್ರಫ್, ಮಲಿಯಾಳಿ , ಕನ್ನಡ, ತುಳು, ಉರ್ದು, ಇಂಗ್ಲಿಷ್ ಮುಂತಾದ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲರಾಗಿದ್ದಾರೆ.
ಅಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಶಾಸಕ ಎ.ಕೆ.ಎಂ ಅಶ್ರಫ್, ಕಾಸರಗೋಡು ಜಿಲ್ಲಾ ಕಬ್ಬಡಿ ಅಸೋಸಿಯೇಶನ್, ಅಂಡರ್ ಆರ್ಮ್ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷರಾಗಿದ್ದರು.
2010ರಿಂದ 2015 ರವರೆಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾಗಿ, 2015ರಿಂದ 2020ರ ತನಕ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.